ಬಾಗಲಕೋಟೆ: ‘ಬೀಳಗಿ ಮತಕ್ಷೇತ್ರದ ಯಡಹಳ್ಳಿಯ ಅಜಾತ ನಾಗಲಿಂಗೇಶ್ವರ ಮಠದ ಅಭಿವೃದ್ಧಿಗಾಗಿ ಶಾಸಕರ ಪ್ರದೇಶಾಭಿವೃದ್ಧಿಯಿಂದ ₹ 15 ಲಕ್ಷ ಹಾಗೂ ಪ್ರವಾಸೋದ್ಯಮ ಇಲಾಖೆ ಯಿಂದ ₹ 25 ಲಕ್ಷ ಸೇರಿದಂತೆ ಒಟ್ಟು ₹ 40 ಲಕ್ಷ ಮಂಜೂರು ಮಾಡಲಾಗಿದೆ’ ಎಂದು ಶಾಸಕ ಜೆ.ಟಿ.ಪಾಟೀಲ ಹೇಳಿದರು.
ತಾಲ್ಲೂಕಿನ ಯಡಹಳ್ಳಿಯ ನಾಗಲಿಂಗೇಶ್ವರ ಮಠದಲ್ಲಿ ಸಿದ್ದರಾಮ ಶಿವಯೋಗಿಗಳ 43ನೇ ಪುಣ್ಯರಾಧನೆಯ ಹಾಗೂ ಜಾತ್ರಾ ಮಹೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಯಡಹಳ್ಳಿ ಗ್ರಾಮ ಮುಳುಗಡೆಯಾಗಿದೆ. ಆದರೆ ಈ ಮಠ ಮುಳುಗಡೆಯಾಗಿಲ್ಲ. ಹಾಗಾಗಿ ಈ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಯಾತ್ರಿ ನಿವಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ’ ಎಂದರು.
‘ಮುಳುಗಡೆ ಸಂತ್ರಸ್ತರು ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ. ಸರ್ಕಾರ ಅವರ ಪರವಾಗಿದೆ. ಚಿಕ್ಕಗಲ ಗಲಿಯಲ್ಲಿ ನಡೆದ ಸಂತ್ರಸ್ತರ ಸಭೆಯಲ್ಲಿ 35 ರಿಂದ 40 ಬೇಡಿಕೆ ಇಡಲಾಗಿದೆ. ಸರ್ಕಾರದಿಂದ ₹ 600 ಕೋಟಿ ಬಿಡುಗಡೆಗೆ ಒತ್ತಾಯಿಸಲಾಗುತ್ತಿದೆ’ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಉಪಾದ್ಯಕ್ಷ ಮುತ್ತಪ್ಪ ಮನ್ನೇರಿ, ಸದಸ್ಯರಾದ ಮೇಲಿಗಿರಿಯಪ್ಪ ನೀಲಣ್ಣವರ, ಭರಮಪ್ಪ ಕೋಟಿ, ರಮೇಶ ನೀಲಣ್ಣವರ, ಶೇಖರಯ್ಯ ಹಿರೇಮಠ, ಪರಶುರಾಮ ಮಾದರ, ಸಿದ್ದರಾಮ ಪೂಜಾರಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.