ADVERTISEMENT

‘ಸುಧಾರಣೆಗೆ ದಾರ್ಶನಿಕರ ಕೊಡುಗೆ ಅಪಾರ’

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 6:09 IST
Last Updated 21 ನವೆಂಬರ್ 2017, 6:09 IST

ಬೀಳಗಿ: ‘ಮನುಕುಲದ ಸುಧಾರಣೆ ಯಲ್ಲಿ ಕನಕ, ಬುದ್ದ, ಬಸವ, ಅಂಬೇಡ್ಕರ್‌ ಅವರಂತಹ ಮಹಾನ್ ದಾರ್ಶನಿಕರ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಉಪನ್ಯಾಸಕ ಡಾ.ಯಶವಂತ ಕೊಕ್ಕೆನ್ನವರ ಹೇಳಿದರು.

ತಾಲ್ಲೂಕಿನ ಕಾತರಕಿ ಗ್ರಾಮದಲ್ಲಿ ಕನಕಶ್ರೀ ಕ್ಷೇಮಾಭಿವೃದ್ಧಿ ಯುವಕ ಸಂಘದಿಂದ ಆಯೋಜಿಸಿದ್ದ ಭಕ್ತ ಕನಕದಾಸರ 530ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

‘ಕನಕದಾಸರು ತಮ್ಮ ಸಾಹಿತ್ಯದ ಮೂಲಕ ಮೇಲು–ಕೀಳು, ಬೇದ–ಭಾವ ತೊಡೆದು ಹಾಕಲು ಪ್ರಯತ್ನಿಸಿದರು. ದೀನ ದಲಿತರು, ಬಡವರಿಗೆ ಸಹಾಯ ಮಾಡಿದರು. ಅವರ ಕೊಡುಗೆಗಳನ್ನು ಮುಂದಿನ ಜನಾಂಗಕ್ಕೆ ತಿಳಿಸಲು ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕಾಗಿದೆ’ ಎಂದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಮುದಾಯದ ಪಾಲಕರು ಮಕ್ಕಳಿಗೆ ಗುಣಾತ್ಮಕ ಹಾಗೂ ಸಂಸ್ಕಾರಯುಕ್ತ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.

ADVERTISEMENT

ಪ್ರದೇಶ ಕುರುಬರ ಸಂಘದ ನಿರ್ದೇಶಕ ಮಲ್ಲು ಹೋಳಿ, ಪತ್ರಕರ್ತ ಡಿ.ಎಂ.ಸಾವಕಾರ ಮಾತನಾಡಿದರು. ಮುಗಳಖೋಡ ಕನಕ ಬ್ರಹ್ಮ ವಿದ್ಯಾಶ್ರಮದ ಚಿನ್ಮಯಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಎ.ಪಿ.ಎಂ.ಸಿ ನಿರ್ದೇಶಕ ಪಾಂಡುರಂಗ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ಲಪ್ಪ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು.

ಕೈವಲ್ಯಾನಂದಮುನಿ ಸ್ವಾಮೀಜಿ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಿ.ಟಿ.ಕೆರಕಲಮಟ್ಟಿ, ವಕೀಲ ಆರ್. ಬಿ.ಹುದ್ದಾರ, ಸದಾಶಿವ ಆಗೋಜಿ, ಯಲ್ಲಪ್ಪ ಜೋಗಿ, ವಿ.ಬಿ.ಮಾಚಪ್ಪನವರ, ಎಸ್.ಬಿ.ವಜ್ಜರಮಟ್ಟಿ, ಎಸ್. ಎಸ್.ಕೆರಕಲಮಟ್ಟಿ, ಭೀಮಪ್ಪ ವಜ್ಜರಮಟ್ಟಿ ಸೇರಿದಂತೆ ಮತ್ತಿತರರು ಇದ್ದರು. ಬೆಳಿಗ್ಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ಅದ್ಧೂರಿಯಾಗಿ ಜರುಗಿತು. ಮಹಿಳೆಯರು ಕುಂಭ ಹೊತ್ತು ಹೆಜ್ಜೆ ಹಾಕಿದರು. ಡೊಳ್ಳುವಾದ್ಯ ಮೆರಗು ನೀಡಿತು.

ನ 24ರಿಂದ ಧರಣಿ
ನಿಡಗುಂದಿ: ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯ ಕೊನೆಯಂಚಿನ ರೈತರಿಗೆ ನೀರು ದೊರೆಯುವವರೆಗೆ ನ 24ರಿಂದ ಮುಖ್ಯ ಎಂಜಿನಿಯರ್‌ ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಸರದಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಕೃಷ್ಣಾ ಕಣಿವೆ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದ್ದಾರೆ. ಪಶ್ಚಿಮ ಕಾಲುವೆಯು ಸುಮಾರು 52 ಕಿ.ಮೀ. ಉದ್ದವಾಗಿದ್ದು 21 ವಿತರಣಾ ಕಾಲುವೆ ಹೊಂದಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.