ಹೊಸಪೇಟೆ: ‘ಇದೇ 29ರಂದು ನಡೆಯಲಿರುವ ಬಸವೇಶ್ವರರ ಜಯಂತಿಯಲ್ಲಿ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುವುದು’ ಎಂದು ಉಪವಿಭಾಗಾಧಿಕಾರಿ ಕಚೇರಿಯ ಗ್ರೇಡ್–2 ತಹಶೀಲ್ದಾರ್ ವಿಜಯಕುಮಾರ್ ತಿಳಿಸಿದರು.ನಗರದ ತಾಲ್ಲೂಕು ಕಚೇರಿಯಲ್ಲಿ ಗುರುವಾರ ನಡೆದ ಬಸವೇಶ್ವರ ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಬೀದರ್ನ ಅನ್ನಪೂರ್ಣ ಅವರು ‘ಬಸವಣ್ಣನ ಚಿಂತನೆಗಳು’ ಕುರಿತು ಉಪನ್ಯಾಸ ನೀಡುವರು’ ಎಂದರು.
ಅಂದು ಬೆಳಿಗ್ಗೆ 9ಕ್ಕೆ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು. ಬಳಿಕ ಭವ್ಯ ಮೆರವಣಿಗೆ ನಡೆಯಲಿದೆ. ಕೊಟ್ಟೂರು ಮಠದಲ್ಲಿ ಸಂಗನಬಸವ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಲಿದೆ.28ರ ಸಂಜೆ ಬಸವೇಶ್ವರ ಬಡಾವಣೆಯ ಉದ್ಯಾನವನದಲ್ಲಿ ಚಿಂತಕ ರಂಜಾನ್ ದರ್ಗಾ ಅವರು ಉಪನ್ಯಾಸ ನೀಡುವರು. ಲಿಂಗಾಯತ ಸಮಾಜದ ಮುಖಂಡ ಮಧುರಚೆನ್ನಶಾಸ್ತ್ರಿ ಮಾತನಾಡಿ, ನಗರದಲ್ಲಿ ಬಸವೇಶ್ವರರ ವೃತ್ತ ನಿರ್ಮಿಸಬೇಕು.
ಅಲ್ಲಿ ಬಸವೇಶ್ವರರ ಪ್ರತಿಮೆ ನಿರ್ಮಿಸಿ, ಆ ವೃತ್ತಕ್ಕೆ ಬಸವಣ್ಣನವರ ಹೆಸರು ಇಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಮುಖಂಡರು ಬೆಂಬಲ ಸೂಚಿಸಿದರು. ಡಿ.ವೈ.ಎಸ್.ಪಿ. ಕುಮಾರಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ, ಲಿಂಗಾಯತ ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಕೆ.ಬಿ.ಶ್ರೀನಿವಾಸ ರೆಡ್ಡಿ, ಕೆ.ಲಿಂಗಪ್ಪ, ಕೆ. ಕೊಟ್ರೇಶ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.