ADVERTISEMENT

3 ದಶಕದ ಬಳಿಕ ಒಂದಾದ ಸಹಪಾಠಿಗಳು

ಕೊಟ್ಟೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಮುಖಾಮುಖಿ

​ಪ್ರಜಾವಾಣಿ ವಾರ್ತೆ
Published 21 ಮೇ 2018, 12:01 IST
Last Updated 21 ಮೇ 2018, 12:01 IST

ಕೊಟ್ಟೂರು: ‘ಶಿಕ್ಷಕರು ತರಗತಿಯಲ್ಲಿನ ಪ್ರತಿ ವಿದ್ಯಾರ್ಥಿಯ ಮನಸ್ಸು ಅರ್ಥಮಾಡಿಕೊಂಡು ಅವರಂತೆ ನಡೆದು ಪಾಠ ಹೇಳುವುದನ್ನು ರೂಢಿಸಿಕೊಳ್ಳಬೇಕು’ ಎಂದು ನಿವೃತ್ತ ಬಿಇಒ ಕೆ.ಜಯಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ 1987-88ನೇ ಸಾಲಿನ 10ನೇ ತರಗತಿ ಬ್ಯಾಚ್‍ನ ವಿದ್ಯಾರ್ಥಿಗಳು ಭಾನುವಾರ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ತಾಲ್ಲೂಕಿನಲ್ಲಿ ಹೆಚ್ಚು ವಿದ್ಯಾರ್ಥಿ ಸಂಖ್ಯೆ ಹೊಂದಿದ್ದ ಕೊಟ್ಟೂರು ಸರ್ಕಾರಿ ಪ್ರೌಢಶಾಲೆ ವಾತಾವರಣ ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಮೂಡಿಸುತ್ತಿತ್ತು. ಶಾಲೆಯಲ್ಲಿ ಶಿಕ್ಷಕರಾ ಗಿದ್ದ ತಾವು ಹಾಗೂ ಇತರೆ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದೇವೆ’ ಎಂದರು.

ADVERTISEMENT

‘ಇಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಹುದ್ದೆಯಲ್ಲಿದ್ದಾರೆ. ಬಹುತೇಕರು ಉತ್ತಮ ಜೀವನ ನಿರ್ವಹಿಸುತ್ತಿದ್ದಾರೆ. 30 ವರ್ಷದ ನಂತರ ಎಲ್ಲ ಸ್ನೇಹಿತರ ಒಂದಾಗಿ ನಡೆಸಿದ ಕಾರ್ಯಕ್ರಮದಲ್ಲಿ ಗುರುಗಳನ್ನು ಗೌರವಿಸಿದ್ದು ಶ್ಲಾಘನೀಯ’ ಎಂದರು.

ಯು.ಡಿ.ಕೊಟ್ರೇಶ್ ಮಾತನಾಡಿ, ‘ಎಲ್ಲರೂ ಒಟ್ಟಾಗಿ ಕಾರ್ಯಕ್ರಮ ಹಮ್ಮಿಕೊಳ್ಳುವ ಜತೆಗೆ, ಆರ್ಥಿಕವಾಗಿ ಕಷ್ಟದಲ್ಲಿದ್ದು, ಮಕ್ಕಳ ಶಿಕ್ಷಣಕ್ಕೆ ತೊಂದರೆ ಅನುಭವಿಸುತ್ತಿರುವ ನಮ್ಮ ಬ್ಯಾಚ್‍ನ ಸ್ನೇಹಿತರಿಗೆ ನೆರವಾಗುವ ಉದ್ದೇಶವಿದೆ. 10ನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದವರನ್ನು ಪ್ರೋತ್ಸಾಹಿ ಸಲಾಗುವುದು’ ಎಂದು ಹೇಳಿದರು.

ಬೆಂಗಳೂರು, ಕೋಲ್ಕತ್ತ, ಗೋವಾ ಇತರೆಡೆ ಉದ್ಯೋಗದಲ್ಲಿರುವ ಮತ್ತು ತಾಲ್ಲೂಕಿನಲ್ಲಿ ನೆಲೆಸಿರುವ ಎಲ್ಲ ಸಹಪಾಠಿಗಳು ಭಾಗವಹಿಸಿದ್ದರು.

ನಿವೃತ್ತ ಶಿಕ್ಷಕರಾದ ಎಸ್.ಎಂ. ರುದ್ರಮುನಿ ಅಯ್ಯ, ಹಳ್ಳಿ ವೀರಣ್ಣ, ಎಚ್.ಎಂ.ಚಂದ್ರಯ್ಯ, ಸಿಬಿಎಂ ಚನ್ನಬಸಯ್ಯ, ಪರಮೇಶ್ವರಪ್ಪ, ಬಸವನಗೌಡ, ಮೂಗಪ್ಪ ಮಾತನಾಡಿದರು. ಸಂಯುಕ್ತ ಪ.ಪೂ.ಕಾಲೇಜು ಉಪ ಪ್ರಾಚಾರ್ಯ ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಎಲ್ಲ ಗುರುಗಳನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಅರಮನಿ ಗುರುಬಸವರಾಜ, ಬಿ.ಎಂ.ಕೊಟ್ರಯ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.