ಬಳ್ಳಾರಿ: ನಗರದ ಕನಕದುರ್ಗಮ್ಮ ಗುಡಿ ಆವರಣದಲ್ಲಿ ಯಾತ್ರಿ ನಿವಾಸ ಉದ್ಘಾಟನೆಗೊಂಡು ಆರು ತಿಂಗಳಾದರೂ ಭಕ್ತರ ಬಳಕೆಗೆ ಬಾಗಿಲು ತೆರೆದಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಸೇರಿರುವ ದುರ್ಗಮ್ಮ ಗುಡಿ ಆವರಣದಲ್ಲಿ ಯಾತ್ರಿನಿವಾಸ ಸ್ಥಾಪನೆಯಾಗಬೇಕು ಎಂಬುದು ಹಲವು ವರ್ಷಗಳ ಕನಸು. ಆದರೆ ನಿವಾಸ ಸ್ಥಾಪನೆಯಾಗಿ, ಉದ್ಘಾಟನೆಗೊಂಡರೂ ಪ್ರಯೋಜನವಾಗದಿರುವುದು ಸದ್ಯದ ಸನ್ನಿವೇಶ.
ನಿವಾಸದ ಎರಡು ಅಂತಸ್ತನಿಂದ ಕೂಡಿದ್ದು, ಕೆಳ ಅಂತಸ್ತಿನಲ್ಲಿ ಬೃಹತ್ ಅಡುಗೆ ಕೋಣೆ ಮತ್ತು ದೊಡ್ಡ ಹಜಾರವಿದೆ. ಹರಕೆ ತೀರಿಸಲು ದೂರದ ಊರುಗಳಿಂದ ಬರುವ ಭಕ್ತರು ಹಾಗೂ ಸ್ಥಳೀಯರು ಈಗಲೂ ದೇವಾಲಯದ ತೆರೆದ ಆವರಣದಲ್ಲಿ ಪೆಂಡಾಲ್ ಹಾಕಿ ಅಡುಗೆ ತಯಾರಿಸುವ ಸನ್ನಿವೇಶ ಬದಲಾಗಿಲ್ಲ. ಬಾಗಿಲು ಹಾಕಿದ ಯಾತ್ರಿನಿವಾಸದ ಮುಂಭಾಗದ ಆವರಣದಲ್ಲಿ, ಕೇಂದ್ರ ಕಾರಾಗೃಹದ ರಸ್ತೆ ಬದಿಯಲ್ಲೇ ಅಡುಗೆ ತಯಾರಿಸಬೇಕಾಗಿದೆ. ಇದರಿಂದ ಈ ಪ್ರದೇಶದಲ್ಲಿ ಹಂದಿ ಮತ್ತು ನಾಯಿಗಳ ಉಪಟಳವೂ ಹೆಚ್ಚಾಗಿದೆ.
ನಿವಾಸದ ಮೊದಲ ಅಂತಸ್ತಿನಲ್ಲಿ ಆರು ಡಾರ್ಮೆಂಟರಿಗಳಿದೆ. ಕಲ್ಯಾಣ ಮಂಟಪದ ವೇದಿಕೆ ಇದೆ. ದೊಡ್ಡ ಹಜಾರವಿದೆ. ಆದರೆ ಇದುವರೆಗೂ ಈ ಡಾರ್ಮೆಂಟರಿಗಳನ್ನು ಭಕ್ತರ ವಾಸ್ತವ್ಯಕ್ಕಾಗಿ ನೀಡಿಲ್ಲ. ಆರು ಡಾರ್ಮೆಂಟರಿಗಳಲ್ಲೂ ಸ್ನಾನಗೃಹ ಮತ್ತು ಶೌಚಾಲಯದ ನಲ್ಲಿಗಳು ಇಲ್ಲ.
* *
ಯಾತ್ರಿ ನಿವಾಸವನ್ನು ಭಕ್ತರ ಬಳಕೆಗೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು
–ಹನುಮಂತಪ್ಪ, ದುರ್ಗಮ್ಮ ಗುಡಿ ಕಾರ್ಯನಿರ್ವಾಹಕ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.