ADVERTISEMENT

ಪೊಲೀಸ್‌ ಇಲಾಖೆ ಸೇರಬಯಸುವ ಬಾಲನಟ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 6:08 IST
Last Updated 10 ಏಪ್ರಿಲ್ 2017, 6:08 IST

ದೊಡ್ಡಬಳ್ಳಾಪುರ: ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ರೈಲ್ವೆ ಚಿಲ್ಡ್ರನ್‌ ಚಲನಚಿತ್ರದ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದಿರುವ ಕೆ.ಮನೋಹರ್‌ಗೆ ಪೊಲೀಸ್ ಇಲಾಖೆ ಸೇರುವ ಆಸೆಯಿದೆ.

ಪ್ರಶಸ್ತಿ ಬಗ್ಗೆ ಸಂತಸ ಹಂಚಿಕೊಂಡಿರುವ ಕೆ.ಮನೋಹರ್‌, ‘ಚಲನಚಿತ್ರದಲ್ಲಿ ನಟಿಸುವುದು ಅಂದರೆ ಏನು ಎನ್ನುವುದನ್ನೇ ತಿಳಿಯದ ನನ್ನನ್ನು ಶಾಲೆಯಲ್ಲಿ ಓದುವಾಗ ಬಂದು ಗುರುತಿಸಿ ಆಯ್ಕೆ ಮಾಡಿಕೊಂಡು ಅಭಿನಯಿಸಲು ಅವಕಾಶ ಮಾಡಿಕೊಟ್ಟ ಚಿತ್ರದ ನಿರ್ದೇಶಕ ಪೃಥ್ವಿ ಕೊಣನೂರು ಕೃತಜ್ಞನಾಗಿದ್ದೇನೆ. ಓದುವುದರೊಂದಿಗೆ ಅವಕಾಶ ದೊರೆತರೆ ನಟಿಸುತ್ತೇನೆ’ ಎಂದಿದ್ದಾನೆ. 

ಗ್ರಾಮದವರಿಗೇ ಗೊತ್ತಿಲ್ಲ: ತಾಲ್ಲೂಕು ಕೇಂದ್ರದಿಂದ ಸುಮಾರು 22ಕಿ.ಮೀ ದೂರದ ಸಾಸಲು ಹೋಬಳಿಯ ತೋಡಲಬಂಡೆ ಗ್ರಾಮಕ್ಕೆ ಭಾನುವಾರ ಮಾಜಿ ಶಾಸಕ ಜೆ.ನರಸಿಂಹಸ್ವಾಮಿ ಅವರು ಮಾಧ್ಯಮದವರೊಂದಿಗೆ ಹೋಗಿ ಗ್ರಾಮದಲ್ಲಿನ ಅರಳಿಕಟ್ಟೆ ಮುಂದೆ ಕೃಷ್ಣಪ್ಪ, ಗಾಯಿತ್ರಿ ಅವರ ಪುತ್ರ ಕೆ.ಮನೋಹರ್‌ ಅವರನ್ನು ಮನೆಯಿಂದ ಕರೆದು ಅಭಿನಂದಿಸಿದರು.

ಅಲ್ಲಿನವರೆಗೆ ಗ್ರಾಮದಲ್ಲಿ ಯಾರಿಗೂ ಮನೋಹರ್‌ ಚಲನಚಿತ್ರದಲ್ಲಿ ಅಭಿನಯಿಸಿದ್ದಾನೆ, ರಾಷ್ಟ್ರಮಟ್ಟದ  ಪ್ರಶಸ್ತಿ ಪಡೆದಿದ್ದಾನೆ ಎನ್ನುವ ಮಾಹಿತಿ ಇರಲಿಲ್ಲ. ಅಲ್ಲದೆ ಶಾಲೆಯಲ್ಲೂ ಯಾರಿಗೂ ತಿಳಿದಿಲ್ಲ.

ಮನೋಹರ್‌ ದೊಡ್ಡಬಳ್ಳಾಪುರದ ಸರ್ಕಾರಿ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ  ಇದ್ದುಕೊಂಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಈ ವರ್ಷ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇವನ ತಂದೆ, ತಾಯಿ ಕೃಷಿ ಕೂಲಿ ಕಾರ್ಮಿಕರಾಗಿದ್ದು ಕೆಲಸಕ್ಕಾಗಿ ಬೆಂಗಳೂರು ರಸ್ತೆಯ ಮಾಸಂದ್ರ ಸಮೀಪದ ರೈತರೊಬ್ಬರ ದ್ರಾಕ್ಷಿ ತೋಟದಲ್ಲಿ ವಾಸವಾಗಿದ್ದಾರೆ.

ತಾಯಿ ಗಾಯಿತ್ರಿ ಮಾತ್ರ 10ನೇ ತರಗತಿವರೆಗೆ ಓದಿದ್ದಾರೆ. ಹೀಗಾಗಿ ಕೂಲಿ ಮಾಡಿಯಾದರೂ ಮಗನನ್ನು ವಿದ್ಯಾವಂತನನ್ನಾಗಿಸಬೇಕು ಎನ್ನುವ ಉದ್ದೇಶದಿಂದ ನಗರದ ಸರ್ಕಾರಿ ವಿದ್ಯಾರ್ಥಿ ನಿಲಯಕ್ಕೆ ಸೇರಿಸಿದ್ದೇವೆ ಎನ್ನುತ್ತಾರೆ ಗಾಯಿತ್ರಿ. ಬೇಸಿಗೆಯಲ್ಲಿ ಶಾಲೆಗೆ ರಜೆ ಇರುವುದರಿಂದ ಮನೋಹರ್ ತಾಯಿಯೊಂದಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT