ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದ ಸಮೀಪದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಗೆ ಅಂದಾಜು ₹20 ಲಕ್ಷ ಅನುದಾನದಲ್ಲಿ ರಸ್ತೆ ನಿರ್ಮಿಸುವುದಾಗಿ ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ ಭರವಸೆ ನೀಡಿದರು.
ತಾಲ್ಲೂಕಿನ ಘಾಟಿ ಕ್ಷೇತ್ರದ ಸಮೀಪದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಗೋ ಶಾಲೆಯ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದೇಶಿ ತಳಿಯ ಹಸುಗಳಿಗೆ ಹೋಲಿಸಿದರೆ ದೇಶಿ ತಳಿಯ ಹಸುಗಳು ರೈತ ಸ್ನೇಹಿಯಾಗಿವೆ. ದೇಶಿ ತಳಿ ಹಸುಗಳ ಹಾಲು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಹೈನುಗಾರಿಕೆ ಹೆಚ್ಚು ಲಾಭ ಗಳಿಸಲು ವಿದೇಶಿ ತಳಿ ಬಳಸುತ್ತಿರುವ ರೈತರು ಸಣ್ಣ ಪುಟ್ಟ ರೋಗಗಳಿಗೆ ತುತ್ತಾಗಿ ಅಕಾಲಿಕ ಮರಣ ಹೊಂದುವ ವಿದೇಶಿ ತಳಿ ಹಸುಗಳಿಂದ ಸಾವಿರಾರು ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ದೇಶಿ ತಳಿಗಳನ್ನು ಸಂರಕ್ಷಿಸುವುದು ಅಗತ್ಯವಾಗಿದೆ ಎಂದರು.
ಪಶು ಸಂಗೋಪನೆ ಇಲಾಖೆ ವೈದ್ಯ ಡಾ.ಶಿವರುದ್ರಪ್ಪ ಮಾತನಾಡಿ, ದೇಶಿ ತಳಿ ಹಸುಗಳಿಗೆ ಪ್ರಚಾರದ ಕೊರತೆ ಉಂಟಾಗಿರುವುದು ರೈತರು ದೂರ ಉಳಿಯಲು ಕಾರಣ.
ದೇಶಿ ತಳಿ ಹಸುಗಳ ಹಾಲು ಆರೋಗ್ಯದಾಯಕವಾಗಿದ್ದು ಉತ್ತಮ ಗುಣಮಟ್ಟವನ್ನು ಹೊಂದಿದೆ. ರೈತರು ಕೇವಲ ಆದಾಯವನ್ನು ಮಾತ್ರ ಪರಿಗಣನೆಗೆ ತಗೆದುಕೊಳ್ಳದೆ ಕೃಷಿ ಚಟುವಟಿಕೆಗಳಿಗೆ ಹಾಗೂ ಉತ್ತಮ ಆರೋಗ್ಯ ಹೊಂದಿರುವ ದೇಶಿ ತಳಿಗಳನ್ನು ಸಾಕಲು ಮುಂದಾಗಬೇಕೆಂದು ಮನವಿ ಮಾಡಿದರು. ಪುಷ್ಪಾಂಡಜ ಮಹರ್ಷಿ ಆಶ್ರಮದ ಪೀಠಾಧ್ಯಕ್ಷ ದಿವ್ಯಜ್ಞಾನಾನಂದಸ್ವಾಮಿ ಸಾನಿಧ್ಯ ವಹಿಸಿದ್ದರು.
ಗೋಶಾಲೆ ಕಾರ್ಯದರ್ಶಿ ದಿನೇಶ್ ಹೆಗಡೆ, ವ್ಯವಸ್ಥಾಪಕ ಕಾಂತರಾಜು, ರಾಮಚಂದ್ರ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್, ನಾಗರಾಜ್, ಪುರಸಭೆ ಮಾಜಿ ಸದಸ್ಯ ಡಿ.ವಿ.ನಾರಾಯಣ ಶರ್ಮ, ಮುಖಂಡರಾದ ಹಾಡೋನಹಳ್ಳಿ ನಾಗರಾಜ್, ಘಾಟಿ ದೇವಾಲಯದ ನಂಜಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.