ADVERTISEMENT

‘ಹೋರಾಟದಿಂದ ಸಮಸ್ಯೆ ನಿವಾರಣೆ’

​ಪ್ರಜಾವಾಣಿ ವಾರ್ತೆ
Published 22 ಮೇ 2017, 7:33 IST
Last Updated 22 ಮೇ 2017, 7:33 IST

ವಿಜಯಪುರ: ‘ರಾಜ್ಯದಲ್ಲಿನ  ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು ಸರ್ಕಾರದ ಯೋಜನೆಗಳಿಂದ ಮಾತ್ರವೇ ಸಾಧ್ಯವಾಗುವುದಿಲ್ಲ, ಜನಪರವಾದ ಸಂಘಟನೆಗಳ ನಿರಂತರವಾದ ಹೋರಾಟಗಳಿಂದ ಸಾಧ್ಯವಾಗುತ್ತದೆ’ ಎಂದು ಜೆಡಿಎಸ್ ಮುಖಂಡ ಎಲ್.ಎನ್. ನಾರಾಯಣಸ್ವಾಮಿ ಹೇಳಿದರು.

ವಿಜಯಪುರ ಹೋಬಳಿ ನಾರಾಯಣಪುರ ಗ್ರಾಮದಲ್ಲಿ ಜಯ ಕರ್ನಾಟಕ ಸಂಘಟನೆಯ ಗ್ರಾಮ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ  ಅವರು ಮಾತನಾಡಿದರು.

‘ರಾಜ್ಯದ ಒಳಿತಿಗಾಗಿ, ಕನ್ನಡಪರ ಸಂಘಟನೆಗಳು ಒಂದಾಗಬೇಕು. ಸ್ವಾತಂತ್ರ್ಯ ಪೂರ್ವದಿಂದಲೂ ನಮಗೆ ಸಿಗಬೇಕಾದಂತಹ ಹಕ್ಕುಗಳು, ಸೌಲಭ್ಯಗಳಿಗಾಗಿ  ಹೋರಾಟ ಮಾಡುತ್ತಿದ್ದರೂ ಇಂದಿಗೂ ಹೋರಾಟದ ಹಾದಿಯಲ್ಲೇ ಎಲ್ಲವನ್ನು ಪಡೆಯಬೇಕಾಗಿದೆ ಎಂದರು.

ಜಯಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ಸಂಸ್ಥಾಪಕ ಅಧ್ಯಕ್ಷರ ಮಾರ್ಗದರ್ಶನದಂತೆ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಉಚಿತವಾಗಿ ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಮುಂದುವರಿಸಲಾಗುತ್ತಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಗೌಡ ಮಾತನಾಡಿ, ‘ರಾಷ್ಟ್ರದಲ್ಲಿ ಯುವಜನರು ಶೇ 55 ರಷ್ಟಿದ್ದು, ಯುವಕರಿಗೆ ಹೆಚ್ಚಿನ ಜವಾಬ್ದಾರಿ ನೀಡಿ, ಪರಿವರ್ತನೆಗೆ  ಮಾರ್ಗದರ್ಶನ ನೀಡಬೇಕು’ ಎಂದರು.

ನಗರ ಘಟಕದ ಅಧ್ಯಕ್ಷ ಕೆ.ಮಂಜುನಾಥ್, ಜಿಲ್ಲಾ ಘಟಕದ ಉಪಾಧ್ಯಕ್ಷ ಅನಿಲ್, ಪ್ರಧಾನ ಕಾರ್ಯದರ್ಶಿ ರಾಮಪ್ರಸಾದ್, ಹೊನ್ನಪ್ಪ, ಮಹೇಂದ್ರ, ಕಾರ್ಯದರ್ಶಿ ಮಂಜುನಾಥ್, ಕೇಶವಕುಮಾರ್, ದಂಡಿಗಾನಹಳ್ಳಿ ಗ್ರಾಮ ಶಾಖೆ ಅಧ್ಯಕ್ಷ ಮಂಜುನಾಥ್, ನಾರಾಯಣಪುರ ಗ್ರಾಮಶಾಖೆ ಅಧ್ಯಕ್ಷ ಅನಂತ್ ಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.