ಬೆಳಗಾವಿ: ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಮುಂಬೈ ಐಐಟಿ ಪ್ರಾಧ್ಯಾಪಕ ಪ್ರೊ.ರಾಮ ಪುನಿಯಾನಿ ಇಲ್ಲಿ ಹೇಳಿದರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 126ನೇ ಜಯಂತಿ ಆಚರಣೆ ಅಂಗವಾಗಿ ಮಂಗಳ ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
‘ಸ್ವಾತಂತ್ರ್ಯ ನಂತರದಲ್ಲಿ ಭಾರತ ದೇಶವು ಸಂವಿಧಾನಾತ್ಮಕವಾಗಿ ಹಾಗೂ ಪ್ರಜಾಸತ್ತಾತ್ಮಕವಾಗಿ ಜಾತ್ಯತೀತ ರಾಷ್ಟ್ರವಾಗಲು ಶ್ರಮಿಸಿದ ಮೂಲ ವ್ಯಕ್ತಿ ಅಂಬೇಡ್ಕರ್’ ಎಂದು ಹೇಳಿದರು.‘ಸಮಾನತೆ ಮತ್ತು ಮಾನವೀಯ ಮೌಲ್ಯಗಳು ಪ್ರತಿಯೊಬ್ಬರಲ್ಲೂ ಬೆಳೆಯ ಬೇಕು. ನಮ್ಮ ಹೊಸ ಯೋಚನೆಗಳು ಕಾರ್ಯರೂಪಕ್ಕೆ ಬಂದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ.ಶಿವಾನಂದ ಹೊಸಮನಿ, ‘ಅಂಬೇಡ್ಕರ್ ಅವರು ಬಹುಮುಖ ವ್ಯಕ್ತಿತ್ವದ ಸಮಾಜಮುಖಿ ಚಿಂತಕರಾಗಿದ್ದರು’ ಎಂದು ಸ್ಮರಿಸಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರ ಜೀವನ ಕುರಿತ 2 ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ಕುಲಸಚಿವ ಪ್ರೊ.ಸಿ.ಎಂ. ತ್ಯಾಗರಾಜ, ಹಣಕಾಸು ಅಧಿಕಾರಿ ಪರಶುರಾಮ ದುಡಗಂಟಿ, ಬಾಬಾಸಾಹೇಬ ಅಂಬೇಡ್ಕರ್ ಅವರ 125ನೇ ವಾರ್ಷಿಕ ಆಚರಣೆಗಳ ಸಮಿತಿ ಅಧ್ಯಕ್ಷ ಪ್ರೊ.ವಿ.ಎಸ್. ಶೀಗೆಹಳ್ಳಿ, ಕಾರ್ಯದರ್ಶಿ ಪ್ರೊ.ಸಿ.ಎನ್. ವಾಘಮೋರೆ, ಸದಸ್ಯ ರಾದ ಪ್ರೊ.ಡಿ.ಎನ್. ಪಾಟೀಲ, ಎಂ.ಎಂ. ಮುತವಳ್ಳಿ ಹಾಗೂ ಅಶೋಕ ಡಿಸೋಜಾ ಉಪಸ್ಥಿತರಿದ್ದರು.
ಅಂಬೇಡ್ಕರ್ ಅವರ 125ನೇ ವರ್ಷಾಚರಣೆಯನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ವರ್ಷಪೂರ್ತಿ ಆಚರಿಸಿದ ಸಂದರ್ಭದಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.ಕುಮಾರ ಧರ್ಮಣ್ಣ ಮತ್ತು ತಂಡ ದವರು ಕ್ರಾಂತಿಗೀತೆಗಳನ್ನು ಹಾಡಿದರು. ಕುಲಸಚಿವ ಪ್ರೊ.ಸಿದ್ದು ಆಲಗೂರು ಸ್ವಾಗತಿಸಿದರು. ಪ್ರೊ.ವಿ.ಎಸ್. ಶೀಗೆಹಳ್ಳಿ ಪರಿಚಯಿಸಿದರು. ಮಧುಶ್ರೀ ಕಳ್ಳಿಮನಿ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಡಿಸೋಜಾ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.