ADVERTISEMENT

‘ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಭರ್ಜರಿ ತಯಾರಿ.

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 5:37 IST
Last Updated 7 ನವೆಂಬರ್ 2017, 5:37 IST
ಸವದತ್ತಿಯಲ್ಲಿ ನಡೆಯಲಿರುವ  ಬಿಜೆಪಿ ಪರಿವರ್ತನಾ ಯಾತ್ರೆಯ ಬೃಹತ್‌ ಸಮಾವೇಶದ ಅಂಗವಾಗಿ ತಾಲ್ಲೂಕು ಕ್ರೀಡಾಂಗಣವನ್ನು ವಿಧಾನ ಪರಿಷತ್‌ ಮಹಾಂತೇಶ ಕವಟಗಿಮಠ, ಶಾಸಕ ಆನಂದ ಮಾಮನಿ, ಗುರುಪಾದ ಕಳ್ಳಿ ಪರಿಶೀಲಿಸಿದರು
ಸವದತ್ತಿಯಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಬೃಹತ್‌ ಸಮಾವೇಶದ ಅಂಗವಾಗಿ ತಾಲ್ಲೂಕು ಕ್ರೀಡಾಂಗಣವನ್ನು ವಿಧಾನ ಪರಿಷತ್‌ ಮಹಾಂತೇಶ ಕವಟಗಿಮಠ, ಶಾಸಕ ಆನಂದ ಮಾಮನಿ, ಗುರುಪಾದ ಕಳ್ಳಿ ಪರಿಶೀಲಿಸಿದರು   

ಸವದತ್ತಿ: ಇದೇ 17 ರಂದು ಸಂಜೆ 5ಕ್ಕೆ ಪಟ್ಟಣಕ್ಕೆ ಆಗಮಿಸಲಿರುವ ಬಿಜೆಪಿ ನವಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆಯ ಸ್ವಾಗತ ಹಾಗೂ ಬೃಹತ್‌ ಸಮಾವೇಶ ನಡೆಯುವ ತಾಲ್ಲೂಕು ಕ್ರೀಡಾಂಗಣವನ್ನು ಸೋಮವಾರ ಬಿಜೆಪಿ ಮುಖಂಡರು ಪರಿಶೀಲಿಸಿದರು.

ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ ಮಾತನಾಡಿ ‘ಮುಂದಿನ ಮುಖ್ಯಮಂತ್ರಿ ಎಂದು ಗುರುತಿಸಿಕೊಂಡ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಆರಂಭವಾದ ಪರಿವರ್ತನಾ ಯಾತ್ರೆಯಿಂದ ಇಡೀ ರಾಜ್ಯದಲ್ಲಿ ಪರಿವರ್ತನೆಯಾಗುವದರ ಜೊತೆಗೆ ಬಿಜೆಪಿ ಮತ್ತೆ ರಾಜ್ಯದಲ್ಲಿ ಅಧಿಕಾರ ವಹಿಸಿಕೊಳ್ಳಲಿದೆ’ ಎಂದರು.

ಕೇಂದ್ರ ಹಾಗೂ ರಾಜ್ಯದ ಸುಮಾರು 70 ಕ್ಕೂ ಹೆಚ್ಚು ನಾಯಕರು ಭಾಗವಹಿಸಲಿದ್ದಾರೆ. ಈ ಬೃಹತ್‌ ಸಮಾವೇಶದ ಮೊದಲು ಸುಮಾರು 2 ಸಾವಿರ ಬೈಕ್‌ಗಳೊಂದಿಗೆ ಪರಿವರ್ತನಾ ಯಾತ್ರೆಯ ಭವ್ಯ ಮೆರವಣಿಗೆ ನಡೆಯಲಿದೆ. ಸಂಜೆ ನಡೆಯುವ ಕಾರ್ಯಕ್ರಮ ಇಡೀ ತಾಲ್ಲೂಕಿನ ಇತಿಹಾಸದಲ್ಲಿ ಮಾದರಿಯಾಗುವಷ್ಟು ಜನರು ಸೇರಲಿದ್ದಾರೆ ಎಂದರು.

ADVERTISEMENT

ಶಾಸಕ ಆನಂದ ಮಾಮನಿ ಮಾತನಾಡಿ, ‘ಈಗಾಗಲೇ ಸುಮಾರು 20ಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಲಾಗಿದೆ. ಕಾರ್ಯಕರ್ತರು, ಅಭಿಮಾನಿಗಳಲ್ಲಿ ಹುಮ್ಮಸ್ಸು ಹೆಚ್ಚಿದೆ. ಸುಮಾರು 40 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ, ಉಪಾಧ್ಯಕ್ಷ ಜಗದೀಶ ಕೌಜಗೇರಿ, ಗುಳಪ್ಪ ಹೊಸಮನಿ, ಅಣ್ಣಾಸಾಹೇಬ ದೇಸಾಯಿ, ಪುರಸಭೆ ಅಧ್ಯಕ್ಷ ಶಿವಾನಂದ ಪಟ್ಟಣಶೆಟ್ಟಿ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಿ.ಚ. ದೇಸಾಯಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಜಿ. ಎಸ್‌. ಗಂಗಲ, ಅಜಿತಕುಮಾರ ದೇಸಾಯಿ, ಈರಣ್ಣಾ ಚಂದರಗಿ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.