ಬೆಳಗಾವಿ: ಟಿಪ್ಪು ಸುಲ್ತಾನ್ ಜಯಂತಿಯನ್ನು ಸರ್ಕಾರದಿಂದ ಆಚರಿಸಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಕಿಸ್ತಾನಕ್ಕೆ ಹೋಗಲಿ ಎಂದು ಬಿಜೆಪಿ ಶಾಸಕ ಸಂಜಯ ಪಾಟೀಲ ಟೀಕಿಸಿದರು.
ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದವು. ಯಾವ ಮುಖ್ಯಮಂತ್ರಿ ಕೂಡ ಟಿಪ್ಪು ಜಯಂತಿ ಆಚರಿಸಿರಲಿಲ್ಲ. ಅದರ ಬಗ್ಗೆ ವಿಚಾರ ಮಾಡಿರಲೂ ಇಲ್ಲ. ಆದರೆ, ಸಿದ್ದರಾಮಯ್ಯ ಅವರು ಆಚರಣೆ ಮಾಡುತ್ತಿದ್ದಾರೆ. ಇಂಥವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಅವರು ಮೈಸೂರಿನಲ್ಲಿ ಹುಟ್ಟಿದವರೋ, ಲಾಹೋರದಲ್ಲೋ ಎಂದು ಪ್ರಶ್ನಿಸಬೇಕಾಗುತ್ತದೆ' ಎಂದರು.
'ನಾವು ಮುಸ್ಲಿಂ ವಿರೋಧಿಗಳಲ್ಲ. ಟಿಪ್ಪು ವಿರೋಧಿಗಳು. ನ.10ರಂದು ಪ್ರತಿ ಗಲ್ಲಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಮಾಡುತ್ತೇವೆ. ಹಿಂದೂಗಳೆಲ್ಲರು ಟಿಪ್ಪು ಜಯಂತಿ ವಿರೋಧಿಸಬೇಕು’ ಎಂದು ಹೇಳಿದರು.
‘ಹಿಂದುನೋ ಅಲ್ಲವೋ ಡಿಎನ್ಎ ಪರೀಕ್ಷೆ ಮಾಡಿಸಬೇಕಾಗಿದೆ’
‘ಮೀನು, ಮಾಂಸ ತಿಂದು ದೇವಸ್ಥಾನಕ್ಕೆ ಹೋಗುವ ಸಿದ್ದರಾಮಯ್ಯ ಅವರು ಹಿಂದುನೋ ಅಲ್ಲವೋ ಎಂದು ಡಿಎನ್ಎ ಪರೀಕ್ಷೆ ಮಾಡಿಸಬೇಕಾಗಿದೆ’ ಎಂದು ಅವರು ಹೇಳಿದರು.
‘ಇಲ್ಲಿನ ಅನ್ನ ತಿಂದು, ನೀರು ಕುಡಿಯುವ ಕೆಲವರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾರೆ’ ಎಂದು ಟೀಕಿಸಿದರು.
‘ಶಾಸಕ ಸ್ಥಾನ ಹೋದರೆ ಹೋಗಲಿ. ನಾನು ಹಿಂದು ಅನ್ನೋದನ್ನು ಎದೆತಟ್ಟಿಕೊಂಡು ಹೇಳುತ್ತೇನೆ. ಅಬ್ದುಲ್ ಕಲಾಂಗೆ ಬೇಕಿದ್ದರೆ ಸಲಾಂ ಹಾಕುತ್ತೇವೆ. ಆದರೆ, ಟಿಪ್ಪುವಿಗಲ್ಲ’ ಎಂದು ತಿಳಿಸಿದರು.
‘ಮುಖ್ಯಮಂತ್ರಿ ಆದವರು ಎಲ್ಲ ಜಾತಿ, ಧರ್ಮದವರನ್ನು ಪ್ರೀತಿಸಬೇಕು. ಒಂದು ಧರ್ಮದವರಿಗೆ ಆದ್ಯತೆ ಕೊಡಬಾರದು. ಸಿದ್ದರಾಮಯ್ಯ ಅವರಿಗೆ ಮುಂದೆ ದೌರ್ಭಾಗ್ಯ ಕಾದಿದೆ. ಮುಂಬರುವ ಚುನಾವಣೆಯಲ್ಲಿ ಹಿಂದುಗಳು ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.