ಚಿಕ್ಕೋಡಿ: ‘ಜಯ ಹರ ಹರ ಶಂಭೋ ಮಹಾದೇವ, ವೀರಭದ್ರೇಶ್ವರ ಮಹಾರಾಜಕೀ ಜೈ ಮುಂತಾಗಿ ವೀರಭದ್ರ ಸ್ವಾಮಿಯನ್ನು ಆರಾಧಿಸುವ ಉದ್ಘೋಷಗಳ ಝೇಂಕಾರಗಳ ಮಧ್ಯೆ ತಾಲ್ಲೂಕಿನ ಯಡೂರ ಗ್ರಾಮದ ವೀರಭದ್ರ ದೇವರ ವಿಶಾಳಿ ಯಾತ್ರೆಯ ಅಂಗವಾಗಿ ಗುರುವಾರ ಸಂಜೆ ಮಹಾರಥೋತ್ಸವ ನಡೆಯಿತು.
ಗ್ರಾಮದ ರಥೋತ್ಸವ ಬೀದಿಯಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಸಂಜೆ ವೀರಭದ್ರ ಮತ್ತು ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿ ಹಾಗೂ ಶ್ರೀಶೈಲ್ ಪೀಠದ ಚನ್ನಸಿಧ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಂಡರಗಿ ಅನ್ನದಾನೇಶ್ವರ ಸಂಸ್ಥಾನಮಠದ ಅನ್ನದಾನೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಗ್ರಾಮದ ಪ್ರಮುಖ ಬೀದಿಯ ಮೂಲಕ ರುದ್ರಪಾದವರೆಗೆ ರಥೋತ್ಸವ ನಡೆಯಿತು. ರಥೋತ್ಸವದ ಮೇಲೆ ಹೆಲಿಕಾಪ್ಟರ್ ಮೂಲಕ ಸಂತೋಷ ಭಾವಿದಂಡಿ ಪರಿವಾರದವರಿಂದ ಪುಷ್ಪವೃಷ್ಟಿ ನಡೆಯಿತು. ಭಕ್ತ ಸಮೂಹದಿಂದ ಜಯಘೋಷಗಳು ಮುಗಿಲು ಮುಟ್ಟಿದ್ದವು. ಭಕ್ತರು ರಥ ಮೇಲೆ ಉತ್ತತ್ತಿ, ಖೊಬ್ಬರಿ, ಬಾಳೆಹಣ್ಣು ಹಾರಿಸಿ ಭಕ್ತಿಭಾವ ಸಲ್ಲಿಸಿದರು.
ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ, ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶರಣಬಸವ ಶಿವಾಚಾರ್ಯ ಸ್ವಾಮೀಜಿ, ಗುರುಶಾಂತಲಿಂಗ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸೇರಿದಂತೆ ನಾಡಿನ ವಿವಿಧ ಮಠಾಧೀಶರು, ಶಾಸಕ ಣೇಶ ಹುಕ್ಕೇರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸದಾಶಿವ ಡಂಗನವರ, ನಿರ್ದೇಶಕ ಅಜಯ ಸೂರ್ಯವಂಶಿ, ಮಹೇಶ ಭಾತೆ ಹಾಗೂ ಸಹಸ್ರಾರು ಭಕ್ತರು ಇದ್ದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.