ಗೋಕಾಕ: ಈಚೆಗೆ ದಲಿತ ಮುಖಂಡರೊಬ್ಬರು ಬ್ರಾಹ್ಮಣ ಸಮಾಜದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸಿ ಇಲ್ಲಿನ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಗಂಗಾಧರ ಮಾಳಗಿ ಅವರ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ನಗರದ ಕಿಲ್ಲೆ ವೆಂಕಟೇಶ್ವರ ದೇವಸ್ಥಾನದ ಬಳಿ ಸೇರಿದ ಬ್ರಾಹ್ಮಣ ಸಮಾಜದವರು ಮೆರವಣಿಗೆ ಮೂಲಕ ಬಸವೇಶ್ವರ ವೃತ್ತ ತಲುಪಿ ಅಲ್ಲಿ ಮಾನವ ಸರಪಳಿ ರಚಿಸಿ, ಕೆಲ ಕಾಲ ರಸ್ತೆ ತಡೆ ನಡೆಸಿದರು. ನಂತರ ಮೆರವಣಿಗೆ ಮಿನಿ ವಿಧಾನಸೌಧ ತಲುಪಿತು.
ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹಣಮಂತ ಕೊಟಬಾಗಿ ಮಾತನಾಡಿ, ‘ವ್ಯಕ್ತಿಯೊಬ್ಬ ಬ್ರಾಹ್ಮಣ ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗೊಂಡಿದೆ’ ಇದು ಖಂಡನಾರ್ಹ ಎಂದರು.
ಅರುಣ ಕುಲಕರ್ಣಿ ಮಾತನಾಡು, ‘ಬ್ರಾಹ್ಮಣ ಸಮಾಜ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾಕಷ್ಟು ತ್ಯಾಗ, ಬಲಿದಾನ ಮಾಡಿದೆ. ಸ್ವಾಭಿಮಾನದಿಂದ ಬದುಕುತ್ತಿರುವ ಸಮಾಜದ ಬಗ್ಗೆ ಕೀಳುಮಟ್ಟದ ಭಾಷೆ ಉಪಯೋಗಿಸಿ ಮಾತನಾಡಿರುವುದು ಅತ್ಯಂತ ಗಂಭೀರ ವಿಷಯ. ಸಮಾಜದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.
ತಹಶೀಲ್ದಾರ್ ಗಂಗಾಧರ ಮಾಳಗಿ ಅವರು ಮನವಿ ಸ್ವೀಕರಿಸಿ, ಮನವಿಯನ್ನು ಮೇಲಧಿಕಾರಿಗಳಿಗೆ ರವಾನಿಸುವ ಭರವಸೆ ನೀಡಿದರು. ಪ್ರಮೋದ ಜೋಶಿ, ಸುಹಾಸಿನಿ ಜೋಶಿ, ಸೋನಕ್ಕ ಜೋಶಿ, ವಿಶ್ವಾಸ ಸುಣಧೋಳಿ, ಪ್ರಸನ್ನ ಕುಲಕರ್ಣಿ, ಪವನ ಜೋಶಿ, ಶೇಷಾಚಲ ಹೊನ್ನತ್ತಿ, ಅವಿನಾಶ ಕುಲಕರ್ಣಿ, ಚಿದಾನಂದ ಯಾರ್ದಿ, ರವಿ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಅನೀಲ ಸುಣಧೋಳಿ, ನಿತೀಶ ದೇಶಪಾಂಡೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.