ADVERTISEMENT

ಇನ್‌ಸ್ಪೆಕ್ಟರ್‌ ಅಮಾನತು

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 19:58 IST
Last Updated 20 ಜುಲೈ 2017, 19:58 IST

ಬೆಂಗಳೂರು: ಹದಿನಾರು ವರ್ಷದ ಬಾಲಕನ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಸಂಬಂಧ ಪ್ರಕರಣ ದಾಖಲಿಸದೇ ನಿರ್ಲಕ್ಷ್ಯ ತೋರಿದ  ಆರೋಪದಡಿ ಮಲ್ಲೇಶ್ವರ ಠಾಣೆಯ ಇನ್‌ಸ್ಪೆಕ್ಟರ್‌ ವೆಂಕಟಾಚಲಯ್ಯ ಅವರನ್ನು ಗುರುವಾರ ಅಮಾನತು ಮಾಡಲಾಗಿದೆ.

ಹವಾನಿಯಂತ್ರಿತ ಯಂತ್ರ ದುರಸ್ತಿ ಕೆಲಸ ಮಾಡುತ್ತಿರುವ ಸೈಯದ್‌ ಅಲಿ ಎಂಬಾತ ಮಲ್ಲೇಶ್ವರದಲ್ಲಿ ವಾಸವಿರುವ ವ್ಯಾಪಾರಿಯೊಬ್ಬರ ಮನೆಗೆ ಹೋಗಿದ್ದ. ಯಂತ್ರ ದುರಸ್ತಿ ವೇಳೆ, ವ್ಯಾಪಾರಿಯ ಮಗನ ಚಡ್ಡಿ ಎಳೆದು ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದ. 

ಇದು ಗೊತ್ತಾಗುತ್ತಿದ್ದಂತೆ ವ್ಯಾಪಾರಿ ದೂರು ನೀಡಲು ಮಲ್ಲೇಶ್ವರ ಠಾಣೆಗೆ ಹೋಗಿದ್ದರು. ಆದರೆ, ಇನ್‌ಸ್ಪೆಕ್ಟರ್‌ ದೂರು ಪಡೆಯಲು ನಿರಾಕರಿಸಿದ್ದರು.

ADVERTISEMENT

ಬಳಿಕ ದೂರುದಾರರು, ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಪಶ್ಚಿಮ) ಮಾಲಿನಿ ಕೃಷ್ಣಮೂರ್ತಿ ಅವರ ಎದುರು ಅಳಲು ತೋಡಿಕೊಂಡಿದ್ದರು. ಡಿಸಿಪಿ ಮೂಲಕ ಪ್ರಾಥಮಿಕ ತನಿಖೆ ನಡೆಸಲಾಗಿತ್ತು. ಇನ್‌ಸ್ಪೆಕ್ಟರ್‌ ಕರ್ತವ್ಯಲೋಪ ಎಸಗಿದ್ದು ಸಾಬೀತಾಗಿದ್ದರಿಂದ ಆದೇಶ ಹೊರಡಿಸಿದ್ದಾರೆ.  ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ದೂರುಗಳು ಬಂದಾಗ  ಕ್ರಮ ಕೈಗೊಳ್ಳದಿದ್ದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು  ಎಚ್ಚರಿಸಿದ್ದಾರೆ.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ’ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು,  ಸೈಯದ್‌ ಅಲಿಯನ್ನು  ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.