ADVERTISEMENT

ಕನ್ನಡ ಹೋರಾಟಗಾರರ ಮರೆವು: ವಿಷಾದ

‘ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು’ ವಿಚಾರಸಂಕಿರಣ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2016, 19:30 IST
Last Updated 1 ನವೆಂಬರ್ 2016, 19:30 IST
ಸಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ಹಾಗೂ ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಸ್ತಲಾಘವ ಮಾಡಿದರು. ಕೆ.ಎಸ್‌. ನಿಸಾರ್‌ ಅಹಮದ್‌, ಪ್ರೊ. ಮಾಲತಿ ಪಟ್ಟಣಶೆಟ್ಟಿ ಚಿತ್ರದಲ್ಲಿದ್ದಾರೆ           –ಪ್ರಜಾವಾಣಿ ಚಿತ್ರ
ಸಪ್ನ ಬುಕ್‌ ಹೌಸ್‌ ವ್ಯವಸ್ಥಾಪಕ ನಿರ್ದೇಶಕ ನಿತಿನ್‌ ಷಾ ಹಾಗೂ ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹಸ್ತಲಾಘವ ಮಾಡಿದರು. ಕೆ.ಎಸ್‌. ನಿಸಾರ್‌ ಅಹಮದ್‌, ಪ್ರೊ. ಮಾಲತಿ ಪಟ್ಟಣಶೆಟ್ಟಿ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು:  ‘ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರನ್ನು ನಾವಿಂದು ಮರೆತಿದ್ದೇವೆ. ಅವರನ್ನು ಚರಿತ್ರೆಗಳಿಂದ ಗಾವುದ ದೂರ ಇಟ್ಟಿದ್ದೇವೆ. ಯುವಜನರಿಗೆ ಅವರ ಸಾಧನೆಗಳನ್ನು ತಿಳಿಸುವ ಕೆಲಸ ಆಗುತ್ತಿಲ್ಲ’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಬೇಸರ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಪ್ನ ಬುಕ್‌ ಹೌಸ್‌ ಆಶ್ರಯದಲ್ಲಿ ನಗರದ ಗಾಂಧಿಭವನದಲ್ಲಿ ಮಂಗಳವಾರ ನಡೆದ ‘ಉತ್ತರ ಕರ್ನಾಟಕದಲ್ಲಿ ಕನ್ನಡ ಕಟ್ಟಿದ ಮಹನೀಯರು’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದಲ್ಲಿ ಮರಾಠಿ ಭಾಷೆಯ ದಬ್ಬಾಳಿಕೆ, ಕ್ರೂರ ಆಡಳಿತದ ಕತ್ತರಿಯಲ್ಲಿ ಸಿಲುಕಿ ಭಾಷೆ ಅವಸಾನದ ಅಂಚಿಗೆ ಸಿಲುಕಿತ್ತು. ಮರಣಶಯ್ಯೆಯಲ್ಲಿದ್ದ ಕನ್ನಡ ಭಾಷೆಗೆ ಈ ಮಹನೀಯರು ಪುನರ್ಜನ್ಮ ನೀಡಿದರು’ ಎಂದರು.

‘1799ರಲ್ಲಿ ಟಿಪ್ಪು ಸುಲ್ತಾನ್‌ ಸಾವಿನ ನಂತರ ಬ್ರಿಟಿಷರು ಕನ್ನಡಿಗರ ಮೇಲೆ ಸೇಡು ತೀರಿಸಿಕೊಳ್ಳಲು ಆರಂಭಿಸಿದರು. ನಮ್ಮ ನಾಡನ್ನು ಮುಂಬೈ ಕರ್ನಾಟಕ, ಹೈದರಾಬಾದ್‌ ಕರ್ನಾಟಕ, ಮದ್ರಾಸ್‌ ಕರ್ನಾಟಕ ಎಂಬ ಮೂರು ಭಾಗಗಳಾಗಿ ವಿಭಜಿಸಿದರು. ಅವರ ನಡೆ ಅನಾಹುತಕಾರಿಯಾಗಿತ್ತು. ಪೇಶ್ವೆಗಳು ನೂರಾರು ಮರಾಠಿ ಶಾಲೆಗಳನ್ನು ತೆರೆದರು. ಆದರೆ, ಒಂದೇ ಒಂದು ಕನ್ನಡ ಶಾಲೆಯನ್ನು ಆರಂಭಿಸಲಿಲ್ಲ. ಅಂತಹ ಸಂದರ್ಭದಲ್ಲಿ ಪ್ರಾಣ ಮುಡಿಪಿಟ್ಟು ಕನ್ನಡ  ಭಾಷೆ ಉಳಿಸಿದ ಮಹನೀಯರು ಪ್ರಾತಃಸ್ಮರಣೀಯರು’ ಎಂದರು.

‘ಆಧುನಿಕ ಕಾಲಘಟ್ಟದಲ್ಲಿ ಇಂಗ್ಲಿಷ್‌ ಭಾಷೆ ಹೆಬ್ಬಾವಿನಂತೆ ಕನ್ನಡ ಭಾಷೆಯನ್ನು ನುಂಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ತುರ್ತು ಅಗತ್ಯ ಆಗಿದೆ. ಇದಕ್ಕಾಗಿ ಇನ್ನೊಂದು ಹೋರಾಟಕ್ಕೆ ಸಿದ್ಧರಾಗಬೇಕು’ ಎಂದರು.

ವಿಚಾರಸಂಕಿರಣ ಉದ್ಘಾಟಿಸಿದ ಹಿರಿಯ ಕವಿ ಪ್ರೊ.ಕೆ.ಎಸ್‌. ನಿಸಾರ್‌ ಅಹಮದ್‌, ‘ಇವತ್ತಿನ ಕನ್ನಡ ಅಧ್ಯಾಪಕರು ಇಂಗ್ಲಿಷ್‌ ಭಾಷೆಯಲ್ಲಿ ಆಹ್ವಾನಪತ್ರಿಕೆಗಳನ್ನು ಕಳುಹಿಸುತ್ತಾರೆ. ಅವರಿಗೆ ನಾಚಿಕೆಯಾಗಬೇಕು’ ಎಂದು ಕಿಡಿಕಾರಿದರು.

‘ಇವತ್ತು ಬೀದಿಬೀದಿಗಳಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೇವೆ. 50–55 ವರ್ಷಗಳ ಹಿಂದೆ ಇಂತಹ ಸಂಭ್ರಮ ಇರಲಿಲ್ಲ. ತಳಿರು ತೋರಣ, ಹಾಡುಗಳ ಲಹರಿ ಇರಲಿಲ್ಲ. ಉತ್ತರ ಕರ್ನಾಟಕದಲ್ಲಿ ಮರಾಠಿಗರ ಭಾಷಾಪ್ರೇಮ ವಿಪರೀತವಾಗಿತ್ತು. ಅಂತಹ ವೇಳೆಯಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ   ಅನೇಕರು ಹೋರಾಟ ಮಾಡಿದರು’ ಎಂದರು.

‘ಗಂಗಾಧರ ಮಡಿವಾಳೇಶ್ವರ ತುರಮರಿ ಅವರು ಬೆಳಗಾವಿ ಜಿಲ್ಲೆಯಲ್ಲಿ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ಅವರ ತಿಂಗಳ ವೇತನ ₹25. ಒಂದು ಸಲ ಸರ್ಕಾರ ಅವರ ವೇತನವನ್ನು ₹12ಕ್ಕೆ ಇಳಿಸಿತು. ಶಿಕ್ಷಕ ವೃತ್ತಿ ತ್ಯಜಿಸಲು ಮುಂದಾದರು. ಮತ್ತೆ ಅವರ ಸಂಬಳವನ್ನು ₹25ಕ್ಕೆ ಏರಿಸಲಾಯಿತು. ಅವರು ಏಳು ಕೃತಿಗಳನ್ನು ಬರೆದಿದ್ದಾರೆ’ ಎಂದರು.

ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ಎನ್‌.ಎಸ್‌. ತಾರಾನಾಥ ಮಾತನಾಡಿ, ‘190 ವರ್ಷಗಳ ಹಿಂದೆ ಕನ್ನಡಕ್ಕಾಗಿ  ಹೋರಾಟ ಮಾಡಿದ ಮಹನೀಯರ ಕೃತಿಗಳು ಅನೇಕ ಮಹನೀಯರ ಕೃತಿಗಳು  ಇಂದು ಅಲಭ್ಯ ಆಗಿವೆ. ಎಷ್ಟೇ ದಿಕ್ಕಿನಲ್ಲಿ ತಪಾಸಣೆ ಮಾಡಿದರೂ ಈ ಕೃತಿಗಳು ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ನಿಘಂಟುತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಠಿಣ ಸನ್ನಿವೇಶ ದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಹೋರಾಟ ಮಾಡಿದವರನ್ನು ನಾವು ಸದಾ ನೆನಪಿಸಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.