ಬೆಂಗಳೂರು: ‘ಕರ್ನಾಟಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಮಸೂದೆ–2014’ ಅನ್ನು ಸರ್ಕಾರ ಸೋಮವಾರ ವಿಧಾನಸಭೆಯಿಂದ ಹಿಂದಕ್ಕೆ ಪಡೆದಿದೆ. ಕೆಲವು ಪರಿಷ್ಕರಣೆಗಳೊಂದಿಗೆ ಇದೇ ಮಸೂದೆಯನ್ನು ಮಂಗಳವಾರ ವಿಧಾನಸಭೆಯಲ್ಲಿ ಪುನಃ ಮಂಡಿಸಲಾಗುತ್ತದೆ.
ಈ ಮಸೂದೆ ಕುರಿತು ಸದನದಲ್ಲಿ ದೀರ್ಘಕಾಲ ಚರ್ಚೆ ನಡೆಯಿತು. ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುವಂತೆ ಹಲವು ಶಾಸಕರು ಪಕ್ಷಭೇದ ಮರೆತು ಒತ್ತಾಯಿಸಿದರು. ಮಸೂದೆಯನ್ನು ಸದನದ ಜಂಟಿ ಆಯ್ಕೆ ಸಮಿತಿಗೆ ಒಪ್ಪಿಸುವ ಕುರಿತು ಯೋಚಿಸುವಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಲಹೆ ಮಾಡಿದರು. ಬಳಿಕ ಮಸೂದೆಯನ್ನು ಹಿಂದಕ್ಕೆ ಪಡೆದ ಸಣ್ಣ ನೀರಾವರಿ ಸಚಿವ ಶಿವರಾಜ್ ತಂಗಡಗಿ ಅವರು, ಮಂಗಳವಾರ ಪರಿಷ್ಕೃತ ಮಸೂದೆ ಮಂಡಿಸುವುದಾಗಿ ಪ್ರಕಟಿಸಿದರು.
ಪೌರ ನಿಗಮಗಳು ಮತ್ತು ಅಧಿಸೂಚಿತ ಪ್ರಾಧಿಕಾರಗಳ ಅಧೀನದಲ್ಲಿರುವ ಕೆರೆಗಳನ್ನು ಮಸೂದೆಯ ವ್ಯಾಪ್ತಿಯಿಂದ ಹೊರಗೆ ಇರಿಸಿರುವುದಕ್ಕೆ ಹಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಬೆಂಗಳೂರು ನಗರಕ್ಕೆ ಪ್ರತ್ಯೇಕ ಕೆರೆ ಅಭಿವೃದ್ಧಿ ಪ್ರಾಧಿಕಾರ ಬೇಡ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು. ಒತ್ತುವರಿ ತೆರವು, ಶಿಕ್ಷೆ, ಮೇಲ್ಮನವಿ ಮತ್ತಿತರ ವಿಷಯಗಳ ಬಗ್ಗೆ ಮಸೂದೆಯಲ್ಲಿ ಸ್ಪಷ್ಟತೆ ಇಲ್ಲ ಎಂದು ದೂರಿದರು.
‘ಕೆರೆಗಳ ಸಂರಕ್ಷಣೆಗಾಗಿ ಸೂಕ್ತ ಕಾಯ್ದೆ ರೂಪಿಸುವಂತೆ ಮುಖ್ಯಮಂತ್ರಿ ಮತ್ತು ಸಚಿವರಿಗೆ ಪತ್ರ ಬರೆದೆ. ವೈಯಕ್ತಿಕವಾಗಿ ಭೇಟಿ ಮಾಡಿದಾಗಲೂ ಮನವಿ ಮಾಡಿದೆ. ಆದರೂ ಸರಿಯಾದ ಕಾಯ್ದೆಯನ್ನು ರೂಪಿಸಲಿಲ್ಲ’ ಎಂದು ಆಡಳಿತ ಪಕ್ಷದ ಶಾಸಕ ರಮೇಶ್ಕುಮಾರ್ ಆರೋಪಿಸಿದರು.
ವಿಧಾನಸಭೆಯಲ್ಲಿ ಸೋಮವಾರ ಮಂಡನೆಯಾದ ‘ಕರ್ನಾಟಕ ಕೆರೆ (ಗ್ರಾಮೀಣ) ಅಭಿವೃದ್ಧಿ ಪ್ರಾಧಿಕಾರ ಮಸೂದೆ’ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಮಸೂದೆ ಮಂಡಿಸುವ ಮುನ್ನ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿಲ್ಲ. ಹೀಗಾಗಿ ನಾನು ಸದನದಲ್ಲಿ ಮಾತಾಡುತ್ತಿದ್ದೇನೆ. ಇದು ನನಗೂ ಮತ್ತು ನಿಮಗೂ (ಸಚಿವರು) ಮುಜುಗರ ಉಂಟು ಮಾಡಬಹುದು. ಆದರೂ ಕೆರೆಗಳ ಹಿತರಕ್ಷಣೆಗಾಗಿ ನಾನು ಮಾತನಾಡಲೇಬೇಕು’ ಎಂದು ಹೇಳಿದರು.
‘ಈ ಮಸೂದೆಯ ಕರಡು ರಚಿಸಿದವರು ಮನಸ್ಸಿಟ್ಟು ಕೆಲಸ ಮಾಡಿಲ್ಲ ಅಥವಾ ಅವರಲ್ಲಿ ಯಾರೊಬ್ಬರೂ ಕೆರೆಗಳ ಸ್ಥಿತಿಯನ್ನು ನೋಡಿರಲಿಕ್ಕಿಲ್ಲ’ ಎಂದು ಅವರು ದೂರಿದರು.
‘ಮೊದಲಿಗೆ ಈ ಮಸೂದೆಯ ಶೀರ್ಷಿಕೆಯೇ ಸರಿಯಿಲ್ಲ. ಕೆರೆಗಳ ಒತ್ತುವರಿ ಆಗಿದೆ ಎಂಬುದು ನಿಮಗೆ ಗೊತ್ತಿದೆ. ಒತ್ತುವರಿ ತೆರವು ಮಾಡುವ ಸಲುವಾಗಿಯೇ ಈ ಮಸೂದೆ ತಂದಿದ್ದೀರಿ. ಕೆರೆ ಅಭಿವೃದ್ಧಿ ಬದಲು ಕೆರೆ ಪ್ರದೇಶ ಸಂರಕ್ಷಣಾ ಪ್ರಾಧಿಕಾರವನ್ನು ರಚಿಸಿ’ ಎಂದು ಅವರು ಸಲಹೆ ನೀಡಿದರು.
‘ಕೆರೆ ಎಂಬುದು ನಮಗೆ ತಾಯಿ ಸಮಾನ. ರಾಜಕಾಲುವೆ, ಕೆರೆಯಂಗಳ, ಕಟ್ಟೆ, ತೂಬುಕಾಲುವೆ, ಕೋಡಿ ಮೊದಲಾದ ಎಲ್ಲವೂ ಸೇರಿ ಕೆರೆಯಾಗುತ್ತದೆ’ ಎಂದು ಅವರು ತಿಳಿಸಿದರು.
‘ಡಿಜಿಟಲ್ ಸರ್ವೆ ಸಿದ್ಧವಿದೆ. ಕೆರೆಗಳ ಬಳಿ ಹೋಗಿ. ಕೆರೆ ಗಡಿ ಸುತ್ತಲೂ ಗುಂಡಿ ತೋಡಿಸಿ. ನಂತರದಲ್ಲಿ ಒತ್ತುವರಿದಾರರು ಆ ಕಡೆ ಸುಳಿಯುವುದಿಲ್ಲ’ ಎಂದು ಅವರು ಸಲಹೆ ನೀಡಿದರು.
ಬಿಜೆಪಿ ಶಾಸಕ ಕೆ.ಜಿ.ಬೋಪಯ್ಯ, ‘ಇದು ಮಸೂದೆ ರೂಪದಲ್ಲೇ ಇಲ್ಲ. ಹೊಸದಾಗಿ ಮಂಡಿಸಿ’ ಎಂದರು.
ಬಿಜೆಪಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಇದು ಕಾಟಾಚಾರದ ಮಸೂದೆ. ಮಸೂದೆ ಪುನರ್ ಪರಿಶೀಲಿಸಿ. ಇನ್ನಷ್ಟು ಚಿಂತನೆ ಮಾಡಿ. ಜಿಲ್ಲಾವಾರು ಸಮಿತಿಗಳಲ್ಲಿ ಜನಪ್ರತಿನಿಧಿಗಳೂ ಸದಸ್ಯರಾಗಲು ಅವಕಾಶ ಇರುವಂತೆ ಕಾಯ್ದೆ ರೂಪಿಸಿ’ ಎಂದರು.
‘ಪರಿಣಾಮಕಾರಿ ಕಾಯ್ದೆ ಹೇಗಿರಬೇಕೆಂಬುದಕ್ಕೆ ಅರಣ್ಯ ಸಂರಕ್ಷಣಾ ಕಾಯ್ದೆ ಅತ್ಯುತ್ತಮ ಮಾದರಿ. ನಾಲ್ಕೇ ಪುಟಗಳಲ್ಲಿ ಪರಿಣಾಮಕಾರಿಯಾಗಿರುವ ಕಾಯ್ದೆ ಅದು. ಅದೇ ಮಾದರಿಯಲ್ಲಿ ಕಾಯ್ದೆ ರೂಪಿಸಿ’ ಎಂದು ಅವರು ಒತ್ತಾಯಿಸಿದರು.
ಬಿಜೆಪಿ ಶಾಸಕ ಗೋವಿಂದ ಕಾರಜೋಳ, ‘ಮಸೂದೆ ವಾಪಸ್ ಪಡೆಯಿರಿ. ರಾಜ್ಯದಲ್ಲಿರುವ ಎಲ್ಲ ಕೆರೆಗಳ ಸಂರಕ್ಷಣೆಗೆ ಸೂಕ್ತ ಕಾಯ್ದೆಯನ್ನು ರೂಪಿಸಿ’ ಎಂದರು.
ಕೆಜೆಪಿ ಶಾಸಕ ಬಿ.ಆರ್.ಪಾಟೀಲ್, ‘ಮಸೂದೆ ವಾಪಸ್ ತೆಗೆದುಕೊಳ್ಳಿ. ತಜ್ಞರ ಸಲಹೆ ಪಡೆದು ಮತ್ತೆ ಮಂಡಿಸಿ’ ಎಂದರು. ಜೆಡಿಎಸ್ ಶಾಸಕ ಡಿ.ಸಿ.ತಮ್ಮಣ್ಣ, ‘ಕೆರೆಗಳ ಒತ್ತುವರಿ ತೆರವು ಕಾರ್ಯಕ್ಕೆ ರೈತರು ಯಾರೂ ಅಡ್ಡಿ ಬರುವುದಿಲ್ಲ. ಹೀಗಾಗಿ ಹೊಸ ಕಾನೂನಿನ ಅಗತ್ಯ ಇಲ್ಲ. ಇದರ ಬದಲು ಕೆರೆಗಳ ಹೂಳು ತೆಗೆಸಲು ಹಣ ಕೊಡಿ’ ಎಂದರು.
ಬಿಜೆಪಿ ಶಾಸಕ ಬಿ.ಎನ್.ವಿಜಯಕುಮಾರ್, ‘ನಗರದ ಕೆರೆಗಳಿಗೆ ನೀರು ಹರಿದು ಬರಲು 685 ಕಿ.ಮೀ. ಉದ್ದದ ರಾಜಕಾಲುವೆಯಲ್ಲಿ ಆಗಿರುವ ಒತ್ತುವರಿ ತೆರವುಗೊಳಿಸಬೇಕು. ಆ ಕಾರ್ಯ ಇದುವರೆಗೆ ಆಗಿಲ್ಲ’ ಎಂದರು.
2 ಲಕ್ಷ ಕೋಟಿ ಮೌಲ್ಯದ ಭೂ ಕಬಳಿಕೆ
‘ಬೆಂಗಳೂರು ನಗರ ಒಂದರಲ್ಲೇ 2 ಲಕ್ಷ ಕೋಟಿ ರೂಪಾಯಿ ಬೆಲೆ ಬಾಳುವ ಸರ್ಕಾರಿ ಜಮೀನು ಮತ್ತು ಕೆರೆ ಜಮೀನನ್ನು ಭೂಗಳ್ಳರು ಕಬಳಿಸಿದ್ದಾರೆ’ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
‘ಕೆರೆ ಅಭಿವೃದ್ಧಿ ಪ್ರಾಧಿಕಾರದ ಮಸೂದೆಯ ವ್ಯಾಪ್ತಿಗೆ ಬೆಂಗಳೂರಿನ ಕೆರೆಗಳನ್ನು ಏಕೆ ಒಳಪಡಿಸಿಲ್ಲ. ಒತ್ತುವರಿ ತೆರವಿಗೆ ಎಷ್ಟು ವರ್ಷ ಬೇಕು’ ಎಂದು ಅವರು ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿ ಮಾತನಾಡಿದ ಅರಣ್ಯ ಸಚಿವ ರಮಾನಾಥ ರೈ, ‘ಬೆಂಗಳೂರಿನ ಕೆರೆಗಳು ಅರಣ್ಯ ಇಲಾಖೆ ಅಧೀನದಲ್ಲಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿವೆ. ಈ ಪ್ರಾಧಿಕಾರದ ಕಾಯ್ದೆಯನ್ನು ಬಲಪಡಿಸಲು ಸದ್ಯದಲ್ಲೇ ತಿದ್ದುಪಡಿ ಮಸೂದೆ ಮಂಡಿಸಲಾಗುವುದು’ ಎಂದು ಸ್ಪಷ್ಟನೆ ನೀಡಿದರು. ‘ಕಳೆದ ಐದು ವರ್ಷಗಳಲ್ಲಿ ಕೆರೆ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ₨ 400 ಕೋಟಿ ಖರ್ಚು ಮಾಡಲಾಗಿದೆ. ಆದರೆ ಕೆರೆಗಳನ್ನು ಹುಡುಕಬೇಕಾದ ಸ್ಥಿತಿ ಇದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.