ADVERTISEMENT

ಕೌಟುಂಬಿಕ ಕಲಹ ಪತ್ನಿಯಿಂದಲೇ ಪತಿಯ ಹತ್ಯೆ!

ಮೃತನ ಅಣ್ಣನಿಂದ ಕಲ್ಪನಾ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:52 IST
Last Updated 23 ಮೇ 2017, 19:52 IST
ಬೆಂಗಳೂರು: ಕೌಟುಂಬಿಕ ಕಲಹದಿಂದಾಗಿ ಸುಬೇದಾರ್ ಪಾಳ್ಯದಲ್ಲಿ ಪತ್ನಿಯೇ ಪತಿಯನ್ನು ಸೋಮವಾರ ರಾತ್ರಿ ಹತ್ಯೆ ಮಾಡಿದ್ದಾರೆ ಎಂದು ಯಶವಂತಪುರ ಠಾಣೆಯಲ್ಲಿ ದೂರು ದಾಖಲಾಗಿದೆ. 
 
ಸತೀಶ್ (45) ಮೃತ ವ್ಯಕ್ತಿ. ಪತ್ನಿ ಕಲ್ಪನಾ (40) ವಿರುದ್ಧ ಮೃತರ ಅಣ್ಣ ಕೃಪಾಶಂಕರ್ ಅವರು ಕೊಲೆ ದೂರು ಕೊಟ್ಟಿದ್ದು, ಆರೋಪಿ ಸದ್ಯ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. 
 
‘ತುಮಕೂರಿನವರಾದ ಸತೀಶ್ ಹಾಗೂ ಕಲ್ಪನಾ 13 ವರ್ಷಗಳ ಹಿಂದೆ ವಿವಾಹವಾಗಿದ್ದು, ವರ್ಷದ ಹಿಂದೆ ನಗರಕ್ಕೆ ಬಂದು ಸುಬೇದಾರ್ ಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಇವರಿಗೆ 12 ವರ್ಷದ ಹೆಣ್ಣು ಮತ್ತು ಒಂದೂವರೆ ವರ್ಷದ ಗಂಡು ಮಗು ಸಹ ಇದೆ.’ 
 
‘ಇಬ್ಬರೂ ಖಾಸಗಿ ಸೆಕ್ಯೂರಿಟಿ ಏಜೆನ್ಸಿಗಳಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ತಿಂಗಳ ಹಿಂದೆ ಕಲ್ಪನಾ ಪತಿಯೊಂದಿಗೆ ಜಗಳವಾಡಿಕೊಂಡು ಯಾರಿಗೂ ತಿಳಿಸದೇ ತವರಿಗೆ ಹೋಗಿದ್ದರು. 
 
ಈ ವೇಳೆ ಪತ್ನಿ ನಾಪತ್ತೆಯಾಗಿದ್ದಾರೆ ಎಂದು ಯಶವಂತಪುರ ಠಾಣೆಯಲ್ಲಿ ಸತೀಶ್ ದೂರು ನೀಡಿದ್ದರು. ಪತ್ನಿ ತವರಿಗೆ ಹೋಗಿರುವ ವಿಷಯ ತಿಳಿದು, ಅವರನ್ನು ವಾಪಸ್ ಕರೆಸಿ ರಾಜೀ ಸಂಧಾನ ನಡೆಸಲಾಗಿತ್ತು’
 
‘ಸೋಮವಾರ ರಾತ್ರಿ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದಿದೆ. ಈ ವೇಳೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.  ವಿಷಯ ಹೊರಗಡೆ ಗೊತ್ತಾಗದಂತೆ ಪತಿಗೆ ಪ್ರಜ್ಞೆ ತಪ್ಪಿದೆ ಎಂಬ ನಾಟಕವಾಡಿ ಮಂಗಳವಾರ ಬೆಳಗ್ಗೆಯೇ  ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಕೃಪಾಶಂಕರ್ ದೂರು ನೀಡಿದ್ದಾಗಿ’ ಪೊಲೀಸರು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.