ಬೆಂಗಳೂರು: ಈಜಿಪುರದಲ್ಲಿ ಸಾಫ್ಟ್ವೇರ್ ಕಂಪೆನಿಯ ಉದ್ಯೋಗಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಸುರೇಶ್ ಅಲಿಯಾಸ್ ರಾಜು (27) ಎಂಬಾತನನ್ನು ವಿವೇಕನಗರ ಪೊಲೀಸರು ಗುರುವಾರ ಬಂಧಿಸಿದ್ದಾರೆ.
‘ಬನ್ನೇರುಘಟ್ಟ ರಸ್ತೆಯ ಚಿಕ್ಕಕಮ್ಮನಹಳ್ಳಿ ನಿವಾಸಿಯಾದ ಆತ ಕೃತ್ಯವೆಸಗಿದ ಬಳಿಕ ತಪ್ಪಿಸಿಕೊಂಡಿದ್ದ. ಘಟನಾ ಸ್ಥಳದಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯ ಆಧರಿಸಿ ಆತನನ್ನು ಬಂಧಿಸಲಾಯಿತು’ ಎಂದು ಪೊಲೀಸರು ತಿಳಿಸಿದರು.
‘ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ 26 ವರ್ಷದ ಯುವತಿಯು ಈಜಿಪುರದ ಪೇಯಿಂಗ್ ಗೆಸ್ಟ್ ಕಟ್ಟಡವೊಂದರಲ್ಲಿ ವಾಸವಿದ್ದರು.’
‘ಕಳೆದ ಡಿ. 29ರಂದು ತಡರಾತ್ರಿ ಕೆಲಸ ಮುಗಿದ ಬಳಿಕ ಯುವತಿಯು ಕ್ಯಾಬ್ನಲ್ಲಿ ಈಜಿಪುರಕ್ಕೆ ಬಂದಿದ್ದರು. ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ 500 ಮೀ. ದೂರದಲ್ಲೇ ಕ್ಯಾಬ್ ನಿಲುಗಡೆಯಾಗಿದ್ದರಿಂದ ಅಲ್ಲಿಂದ ನಡೆದುಕೊಂಡು ಹೋಗುತ್ತಿದ್ದರು. ಅಷ್ಟರಲ್ಲಿ ಕ್ಯಾಬ್ ಸಹ ಸ್ಥಳದಿಂದ ಹೊರಟು ಹೋಗಿತ್ತು. ಈ ವೇಳೆಯೇ ಬೈಕ್ನಲ್ಲಿ ಬಂದ ಆರೋಪಿಯು ಯುವತಿಯನ್ನು ಎಳೆದಾಡಿದ್ದ. ತದನಂತರ ಅವರ ಬಳಿ ಇದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಈ ಬಗ್ಗೆ ಯುವತಿ ನೀಡಿದ್ದ ದೂರಿನನ್ವಯ ಲೈಂಗಿಕ ದೌರ್ಜನ್ಯ (ಐಪಿಸಿ 354) ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದು ಪೊಲೀಸರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.