ಬೆಂಗಳೂರು: ನಿಗದಿತ ಸಮಯಕ್ಕೆ ವಸತಿ ಸಮುಚ್ಚಯ ಹಸ್ತಾಂತರಿಸದ ಡಿಎಲ್ಎಫ್ ಬಿಲ್ಡರ್ಸ್ ವಿರುದ್ಧ. ಈಗಾಗಲೇ ಹಣ ಪಾವತಿಸಿರುವ ಫ್ಲ್ಯಾಟ್ ಆಕಾಂಕ್ಷಿಗಳು ಬೇಗೂರು ಸಮೀಪದ ಅಕ್ಷಯನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಬೊಮ್ಮನಹಳ್ಳಿ ಪ್ರದೇಶದ ಬೇಗೂರು ರಸ್ತೆಯಲ್ಲಿ 2012ರಲ್ಲೇ ನಿವೇಶನ ನೀಡುವ ಭರವಸೆ ನೀಡಿ, ಎರಡು ಕೊಠಡಿ ಮನೆಗೆ ₹ 32 ಲಕ್ಷ ಮತ್ತು 3 ಕೊಠಡಿ ಮನೆಗೆ ₹ 46 ಲಕ್ಷಗಳನ್ನು ಪಡೆಯಲಾಗಿತ್ತು. ಆದರೆ, 2012ರಿಂದಲೂ ಡಿಎಲ್ಎಫ್ ಕಂಪೆನಿ ಕಾರಣಗಳನ್ನು ನೀಡುತ್ತಲೇ ಬಂದಿದೆ’ ಎಂದು ನೂರಾರು ಪ್ರತಿಭಟನಾಕಾರರು ಆರೋಪಿಸಿದರು.
‘2013ರ ಆಗಸ್ಟ್ ತಿಂಗಳಿನಲ್ಲಿ ಹಣ ಪಾವತಿಸಿದ 120ಕ್ಕೂ ಹೆಚ್ಚು ಮಂದಿ ಸಹಿ ಮಾಡಿ ತಮ್ಮ ಬೇಡಿಕೆಗಳನ್ನು ಕಂಪೆನಿಗೆ ನೀಡಿದೆವು. ಆದರೆ ಈ ಬೇಡಿಕೆಗಳನ್ನು ತಳ್ಳಿಹಾಕಿದ ಕಂಪೆನಿಯ ಪ್ರತಿನಿಧಿಗಳು, ಏನೂ ಬೇಕಾದರೂ ಮಾಡಿಕೊಳ್ಳಿ ಎಂಬ ಉತ್ತರ ನೀಡಿದ್ದರು ಎಂದು ಫ್ಲ್ಯಾಟ್ ಆಕಾಂಕ್ಷಿ ರಣಬೀರ್ ಅವರು ಆರೋಪಿಸಿದರು.
‘ಡಿಎಲ್ಎಫ್ ಕಂಪೆನಿ ಯಾವುದೇ ಕಾರಣಕ್ಕೂ ಮೋಸ ಮಾಡುವುದಿಲ್ಲ ಎಂಬ ನಂಬಿಕೆ ಇತ್ತು. ಕೆಲವೇ ಕೆಲವು ಮಂದಿ 2012ರಲ್ಲಿ ನಮ್ಮೊಂದಿಗೆ ಕೈ ಜೋಡಿಸಿದರು. ಆದರೆ, ಮೂರು ವರ್ಷ ಕಳೆದರೂ ಫ್ಲ್ಯಾಟ್ ನೀಡದ ಕಾರಣ ಈಗ ಬಹುತೇಕರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ’ ಎಂದು ಪ್ರತಿಭಟನಾಕಾರರೊಬ್ಬರು ತಿಳಿಸಿದರು.
ಹಲವು ಗ್ರಾಹಕ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಡಿಎಲ್ಎಫ್ ವಿರುದ್ಧ ತಕ್ಷಣವೇ ಕ್ರಮ ಜರುಗಿಸಿ, ನ್ಯಾಯ ಒದಗಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.