ಬೆಂಗಳೂರು: ‘ಮಲ್ಲೇಶ್ವರದ ಸೇಂಟ್ ಪೀಟರ್ಸ್ ಸೆಮಿನರಿಯ ರೆಕ್ಟರ್ ಕೆ.ಜೆ.ಥಾಮಸ್ ಅವರ ಕೊಲೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ಕ್ಯಾಥೋಲಿಕ್ ಕ್ರೈಸ್ತ ಕನ್ನಡ ಸಂಘದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ರಫಾಯಲ್ ರಾಜ್, ‘ಶುಭ ಶುಕ್ರವಾರ (ಗುಡ್ ಫ್ರೈಡೆ) ದಿನವಾದ ಇಂದು ಏಸುಕ್ರಿಸ್ತನನ್ನು ಶಿಲುಬೆಗೆ ಏರಿಸಿದ ದಿನವಾಗಿದೆ. ಅದೇ ರೀತಿ ನಿರಾಪರಾಧಿಗಳಾದ ಕನ್ನಡ ಗುರುಗಳನ್ನು ಬಂಧಿಸಿರುವುದು ಕನ್ನಡಿಗರಿಗೆ ನಿಜವಾಗಿ ಶಿಲುಬೆಗೇರಿಸಿದ ದಿನದಂತಾಗಿದೆ’ ಎಂದರು.
‘ಪ್ರಕರಣದಲ್ಲಿ ಬಂಧಿಸಿರುವ ಅಮಾಯಕ ಪಾದ್ರಿಗಳಾದ ಫಾದರ್ ಎಲಿಯಸ್ ಮತ್ತು ಫಾದರ್ ವಿಲಿಯಂ ಪ್ಯಾಟ್ರಿಕ್ ಅವರನ್ನು ಕೊಲೆಪಾತಕರ ಸಾಲಿಗೆ ನಿಲ್ಲಿಸಿರುವುದು ಅನ್ಯಾಯವಾಗಿದೆ. ಈ ಪ್ರಕರಣದಲ್ಲಿ ಆರ್ಚ್ ಬಿಷಪ್ ಬರ್ನಾಡ್ ಮೊರಾಸ್ ಅವರು ತಟಸ್ಥರಾಗಿರುವುದು ಸರಿಯಲ್ಲ. ಅವರ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ಹೇಳಿದರು.
‘ಪ್ರಕರಣದ ತನಿಖೆ ನಡೆಸುತ್ತಿರುವ ಡಿಸಿಪಿ ವಿಕ್ಟರ್ ಡಿಸೋಜಾ ಅವರು ಕನ್ನಡ ಧರ್ಮಗುರುಗಳನ್ನು ಹಾಗೂ ಕನ್ನಡ ಕ್ರೈಸ್ತರನ್ನು ತನಿಖೆಗೆ ಎಂದು ಒಳಪಡಿಸಿ ಬಲವಂತವಾಗಿ ಹೇಳಿಕೆ ಪಡೆದಿದ್ದಾರೆ. ಇದರ ಹಿಂದೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರ ಕೈವಾಡವಿದೆ. ಹೀಗಾಗಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.
ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ‘ಕೆಲ ವ್ಯಕ್ತಿಗಳ ಒತ್ತಾಸೆಗೆ ಮಣಿದು ಕನ್ನಡ ಕ್ರೈಸ್ತ ಧರ್ಮಗುರುಗಳನ್ನು ಬಂಧಿಸಿರುವುದು ಸರಿಯಲ್ಲ’ ಎಂದರು.
ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್, ಸಾಹಿತಿ ಎಲ್.ಎನ್.ಮುಕುಂದರಾಜ್, ಶ್ರೀಸಾಮಾನ್ಯರ ಕೂಟದ ಅಧ್ಯಕ್ಷ ಶ್ರ.ದೆ.ಪಾರ್ಶ್ವನಾಥ್, ಕೇಂದ್ರ ಕನ್ನಡ ಕ್ರಿಯಾ ಸಮಿತಿ ರಾಜ್ಯಾಧ್ಯಕ್ಷ ವ.ಚ.ಚನ್ನೇಗೌಡ ಮತ್ತಿತ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.