ADVERTISEMENT

ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:52 IST
Last Updated 26 ಏಪ್ರಿಲ್ 2018, 19:52 IST
ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು
ನಗರದಲ್ಲಿ ಗಾಳಿ–ಮಳೆ, ನೆಲಕ್ಕುರುಳಿದ ಮರಗಳು   

ಬೆಂಗಳೂರು: ನಗರದಲ್ಲಿ ಪೂರ್ವಮುಂಗಾರಿನ ಆರ್ಭಟ ಗುರುವಾರವೂ ಮುಂದುವರಿಯಿತು. ಮಳೆಯೊಂದಿಗೆ ಬಲವಾದ ಗಾಳಿಯೂ ಬೀಸಿದ್ದರಿಂದ ವಿವಿಧೆಡೆ ಮರಗಳು ನೆಲಕ್ಕುರುಳಿರುವ ಬಗ್ಗೆ ವರದಿಯಾಗಿದೆ.

ಮಳೆಯೊಂದಿಗೆ ಮಿಂಚು ಗುಡುಗಿನ ಆರ್ಭಟವೂ ಜೋರಾಗಿತ್ತು. ರಾತ್ರಿ 9.30ರ ಸುಮಾರಿಗೆ ಆರಂಭವಾದ ಮಿಂಚಿನ ಸಂಚಾರ ಎದೆ ಝಲ್‌ ಎನಿಸುವಂತಿತ್ತು. ಮಿಂಚು ಒಮ್ಮೆ ಇಡಿ ಬಾನನ್ನೇ ಬೆಳಗಿಸಿದರೆ, ಮೊತ್ತೊಮ್ಮೆ ಆಕಾಶದಲ್ಲಿ ಬೆಳ್ಳಿ ರೇಖೆ ಮೂಡಿಸಿದಂತಿತ್ತು. ಕೆಲವೊಮ್ಮೆ ಕತ್ತಿ ಝಳಪಿಸಿದಂತೆ ಕಾಣಿಸಿತು. ಮಿಂಚು ಮರೆಯಾಗುತ್ತಿದ್ದಂತೆ ಕೇಳಿಸಿದ ಗುಡುಗಿನ ಶಬ್ದ ನಡುಕು ಹುಟ್ಟಿಸುವಂತಿತ್ತು.

ನಗರದ ಕೇಂದ್ರ ಭಾಗದ ಕಬ್ಬನ್‌ ಪಾರ್ಕ್‌, ವಿಧಾನಸೌಧ, ಹಲಸೂರು, ಅಶೋಕ ನಗರ, ವಿಲ್ಸನ್‌ ಗಾರ್ಡನ್‌, ವಿವೇಕನಗರ ಮತ್ತು ‍ಪಶ್ಚಿಮ ಭಾಗದಲ್ಲಿರುವ, ಚಿಕ್ಕಪೇಡೆ, ಉಪ್ಪಾರಪೇಟೆ, ಮೆಜೆಸ್ಟಿಕ್‌, ಕಾಟನ್‌ಪೇಟೆ, ಚಂದ್ರಾಲೇಔಟ್‌ ಹಾಗೂ ಉತ್ತರ ಭಾಗದ ಮಲ್ಲೇಶ್ವರ, ಶೇಷಾದ್ರಿಪುರ, ಶ್ರೀರಾಂಪುರ, ರಾಜಾಜಿನಗರ,  ಸುಬ್ರಮಣ್ಯ ನಗರ, ನಂದಿನಿ ಬಡಾವಣೆ, ಯಶವಂತಪುರ, ಮತ್ತೀಕೆರೆ, ಮಹಾಲಕ್ಷ್ಮಿ ಬಡಾವಣೆಯಲ್ಲಿ ರಾತ್ರಿ 7ಗಂಟೆಯಿಂದ 10 ಗಂಟೆಯವರೆಗೆ ಸಾಧಾರಣ ಮಳೆಯಾಗಿದೆ.

ADVERTISEMENT

ನೆಲಮಂಗಲ, ಹೊಸ್ಕೂರು, ಮಾಕಳಿ, ಸುದ್ದುಗುಂಟೆ ಪಾಳ್ಯ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಳೆ ಸುರಿದಿದೆ. ಆದರೆ, ಯಾವುದೇ ಆಸ್ತಿಪಾಸ್ತಿ ಹಾನಿಯಾಗಿರುವ ಬಗ್ಗೆ ವರದಿಗಳಿಲ್ಲ.

ಹೊಸೂರು ರಸ್ತೆಯ ಎಲೆಕ್ಟ್ರಾನಿಕ್‌ ಸಿಟಿ, ಬೊಮ್ಮನಹಳ್ಳಿ, ಚಂದಾಪುರ ಹಾಗೂ ಹೆಬ್ಬಾಳ, ನಾಗವಾರ, ರಾಮಮೂರ್ತಿ ನಗರ, ಮತ್ತು ವಿಜಯನಗರ, ಮಾಗಡಿ ರಸ್ತೆ, ಅತ್ತಿಗುಪ್ಪೆಯಲ್ಲಿ ಮಳೆಯಾಗಿದೆ. ಮಳೆಯ ಬಿರುಸು ಕಡಿಮೆಯಾಗಿದ್ದರಿಂದ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ ಎಂದು ಪೊಲೀಸ್‌ ನಿಯಂತ್ರಣ ಕೊಠಡಿಯ ಮೂಲಗಳು ತಿಳಿಸಿವೆ.

ಮಳೆಯಿಂದಾಗಿ ಸಂಚಾರ ದಟ್ಟಣೆ ಆಗಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಸಂಚಾರ ಪೊಲೀಸ್‌ ವಿಭಾಗದ ನಿಯಂತ್ರಣ ಕೊಠಡಿಯ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.