ಬೆಂಗಳೂರು: ‘ಫೆ. 17ರ ರಾತ್ರಿ ಅಣ್ಣನನ್ನು (ವಿದ್ವತ್) ಮಲ್ಯ ಆಸ್ಪತ್ರೆಗೆ ದಾಖಲಿಸಿದ್ದ ವೇಳೆಯಲ್ಲೇ, ಅಲ್ಲಿಗೆ ಬಂದು ಗಲಾಟೆ ಮಾಡಿದ್ದ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರು, ನನ್ನ ಮೇಲೂ ಹಲ್ಲೆ ಮಾಡಿದ್ದರು’ ಎಂದು ವಿದ್ವತ್ ಅವರ ಸಹೋದರ ಸಾತ್ವಿಕ್, ಸಿಸಿಬಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಈ ಪ್ರಕರಣದಲ್ಲಿ ಸಾತ್ವಿಕ್ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ತನಿಖಾಧಿಕಾರಿ ಸಿಸಿಬಿಯ ಇನ್ಸ್ಪೆಕ್ಟರ್ ಅಶ್ವತ್ಥಗೌಡ ಅವರು ವಿದ್ವತ್ ಅವರ ಜತೆಗೆ ಸಾತ್ವಿಕ್ ಹೇಳಿಕೆಯನ್ನೂ ಪಡೆದುಕೊಂಡಿದ್ದಾರೆ.
‘ಅಣ್ಣನ ಮೇಲೆ ನಡೆದ ಹಲ್ಲೆಯ ಬಗ್ಗೆ ಸ್ನೇಹಿತರೊಬ್ಬರು ಕರೆ ಮಾಡಿ ತಿಳಿಸಿದ್ದರು. ನಾನು ಫರ್ಜಿ ಕೆಫೆಗೆ ಹೋಗುವಷ್ಟರಲ್ಲೇ ಅಣ್ಣನನ್ನು ಮಲ್ಯ ಅಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿಗೆ ಹೋದಾಗ ನಲಪಾಡ್ ಹಾಗೂ ಆತನ ಸಹಚರರೂ ಅಲ್ಲಿದ್ದರು. ಅವರೆಲ್ಲ ಕೂಗಾಡುತ್ತಾ ಅಣ್ಣನಿಗೆ ಬೈಯುತ್ತಿದ್ದರು. ಐಸಿಯುಗೆ ಹೋಗಿ ಹಲ್ಲೆ ಮಾಡುವುದಾಗಿ ಹೇಳುತ್ತಿದ್ದರು. ಅವರ ವರ್ತನೆಯನ್ನು ಪ್ರಶ್ನಿಸಿದ್ದೆ.’
‘ಆಗ ನನ್ನ ಬಳಿ ಬಂದಿದ್ದ ನಲಪಾಡ್, ‘ವಿದ್ವತ್ನನ್ನು ಆಸ್ಪತ್ರೆಗೆ ದಾಖಲಿಸಬೇಡ. ಕರೆದುಕೊಂಡು ಹೋಗು’ ಎಂದಿದ್ದ. ಅದನ್ನು ಪ್ರಶ್ನಿಸುತ್ತಿದ್ದಂತೆ ನನ್ನ ಮೇಲೆ ಹಲ್ಲೆ ನಡೆಯಿತು. ಕೆಲ ಹೊತ್ತಿನ ಬಳಿಕ ಆತ ಅಲ್ಲಿಂದ ಹೊರಟುಹೋದ’ ಎಂದು ಸಾತ್ವಿಕ್ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.