ADVERTISEMENT

ನಾಲ್ವರ ಸೆರೆ; ₹ 1 ಕೋಟಿ ಜಪ್ತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2017, 19:57 IST
Last Updated 25 ಏಪ್ರಿಲ್ 2017, 19:57 IST
ಅಶೋಕನಗರ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು
ಅಶೋಕನಗರ ಪೊಲೀಸರಿಗೆ ಸಿಕ್ಕಿ ಬಿದ್ದ ಆರೋಪಿಗಳು   

ಬೆಂಗಳೂರು:  ರದ್ದಾದ ನೋಟುಗಳ ಬದಲಾವಣೆ ದಂಧೆಯಲ್ಲಿ ತೊಡಗಿದ್ದ ಆರೋಪದಡಿ 4 ಮಂದಿಯನ್ನು ಬಂಧಿಸಿರುವ ಅಶೋಕನಗರ ಪೊಲೀಸರು, ₹ 1 ಕೋಟಿ ಮೊತ್ತದ ರದ್ದಾದ ನೋಟುಗಳು ಹಾಗೂ ಫಾರ್ಚೂನರ್ ಕಾರನ್ನು ಜಪ್ತಿ ಮಾಡಿದ್ದಾರೆ.

ಬಾಣಸವಾಡಿಯ ಜಿ.ಲಕ್ಷ್ಮೀಪತಿ, ಆತನ ತಮ್ಮ ಕಾಂತರಾಜುಗೌಡ, ಬೈಯಪ್ಪ ರೆಡ್ಡಿ ಹಾಗೂ ಶ್ಯಾಮ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಗುಪ್ತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

‘ರಿಯಲ್ ಎಸ್ಟೇಟ್ ಉದ್ಯಮಿಗಳಾದ ಲಕ್ಷ್ಮೀಪತಿ ಹಾಗೂ ಕಾಂತರಾಜು, ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದರು. ₹ 500 ಹಾಗೂ ₹ 1,000 ಮುಖಬೆಲೆಯ ನೋಟುಗಳನ್ನು ಸರ್ಕಾರ ರದ್ದುಗೊಳಿಸಿದ ಬಳಿಕ, ದಾಖಲೆಗಳಿಲ್ಲದ ಕಾರಣ ಅವರು ಹಣ ಬದಲಾವಣೆಗೆ ಮುಂದಾಗಿರಲಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ADVERTISEMENT

‘ಈ ಮಧ್ಯೆ ಅವರಿಗೆ ಇನ್ನೊಬ್ಬ ಉದ್ಯಮಿ ರಾಜೀವ್ ಗುಪ್ತ ಎಂಬಾತನ ಪರಿಚಯವಾಗಿದೆ. ಆತ ಎನ್‌ಆರ್ಐಗಳ ಮೂಲಕ ಶೇ 40ರ ಕಮಿಷನ್ ದರದಲ್ಲಿ ಚೆನ್ನೈ ಆರ್‌ಬಿಐ ಕಚೇರಿಯಲ್ಲಿ ನೋಟುಗಳನ್ನು ಬದಲಾಯಿಸಿಕೊಡುವುದಾಗಿ ನಂಬಿಸಿದ್ದಾನೆ. ಅದಕ್ಕೆ ಒಪ್ಪಿದ ಸೋದರರು, ಸಹಚರರನ್ನು ಕರೆದುಕೊಂಡು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ರೆಸಿಡೆನ್ಸಿ ರಸ್ತೆಗೆ ಬಂದಿದ್ದರು.’

‘ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ಎಸ್‌ಐ ಬಿ.ಆರ್.ರಾಘವೇಂದ್ರ ಹಾಗೂ ಸಿಬ್ಬಂದಿ ಮಫ್ತಿಯಲ್ಲಿ ಸ್ಥಳಕ್ಕೆ ತೆರಳಿದ್ದರು. ರಾಜೀವ್‌ ಗುಪ್ತನಿಗಾಗಿ ಒಂದು ತಾಸು ಕಾದರೂ, ಆತ ಸ್ಥಳಕ್ಕೆ ಬಾರದಿದ್ದಾಗ ಸಿಬ್ಬಂದಿ ಆ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಆಗ ಕಾರಿನಲ್ಲಿ ನೋಟುಗಳು ಪತ್ತೆಯಾದವು. ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.