ಬೆಂಗಳೂರು: ಪತ್ರಕರ್ತೆಯರನ್ನು ಅವಮಾನಿಸುವ ಫೇಸ್ಬುಕ್ ಫೋಸ್ಟ್ವೊಂದನ್ನು ಶೇರ್ ಮಾಡಿದ್ದ ತಮಿಳುನಾಡು ಬಿಜೆಪಿ ಮುಖಂಡ ಎಸ್.ವಿ ಶೇಖರ್ ವರ್ತನೆ ಖಂಡಿಸಿ ಕರ್ನಾಟಕ ಪತ್ರಕರ್ತೆಯರ ಸಂಘ, ಪ್ರೆಸ್ಕ್ಲಬ್ ಮತ್ತು ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರು ಪುರಭವನದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.
ಪತ್ರಕರ್ತೆಯರು ಶೇಖರ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪತ್ರಕರ್ತೆಯರ ಬಗ್ಗೆ ಹಗುರವಾಗಿ ಮಾತನಾಡಿರುವ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹಿರಿಯ ಪತ್ರಕರ್ತೆಯರಾದ ಆರ್.ಪೂರ್ಣಿಮಾ, ವಿಜಯಮ್ಮ, ಮಾಲತಿ ಭಟ್, ಪದ್ಮಾ ಶಿವಮೊಗ್ಗ, ಶಾಂತಲಾ ಧರ್ಮರಾಜ್, ಹವ್ಯಾಸಿ ಪತ್ರಕರ್ತೆ ಸಂಧ್ಯಾರಾಣಿ, ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ಅನಂತಸುಬ್ಬರಾವ್, ಪ್ರೆಸ್ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು, ಮಾಧ್ಯಮಗಳ ಮಹಿಳಾ ಪ್ರತಿನಿಧಿಗಳು, ಸಾಮಾಜಿಕ ಹೋರಾಟಗಾರರು ಭಾಗವಹಿಸಿದ್ದರು.
‘ಪ್ರಮುಖ ವ್ಯಕ್ತಿಗಳೊಂದಿಗೆ ಮಲಗದಿದ್ದರೆ, ವರದಿಗಾರ್ತಿ ಅಥವಾ ನಿರೂಪಕಿ ಆಗಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯಗಳಿಗಿಂತ ಮಾಧ್ಯಮ ಸಂಸ್ಥೆಗಳಲ್ಲೇ ಲೈಂಗಿಕ ದೌರ್ಜನ್ಯಗಳು ಹೆಚ್ಚು ನಡೆಯುತ್ತವೆ’ ಎಂಬ ಹೇಳಿಕೆ, ಶೇಖರ್ ಅವರು ಶೇರ್ ಮಾಡಿದ ಪೋಸ್ಟ್ನಲ್ಲಿ ಇತ್ತು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಅವರು ಪೋಸ್ಟ್ ತೆಗೆದುಹಾಕಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.