ಬೆಂಗಳೂರು: ಚಿತ್ರನಟಿಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದಡಿ ಪೋಷಕ ನಟ ಎಸ್.ಎನ್.ರಾಜಶೇಖರ್ ಎಂಬುವರನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
‘ನಾನು ಹೊಸ ಚಿತ್ರವೊಂದರಲ್ಲಿ ನಾಯಕ ನಟಿಯಾಗಿ ಅಭಿನಯಿಸಿದ್ದೇನೆ. ಆ ಚಿತ್ರದಲ್ಲಿ ರಾಜಶೇಖರ್ ನನ್ನ ತಂದೆ ಪಾತ್ರ ಮಾಡಿದ್ದಾರೆ. ನನಗೂ, ನಾಯಕ ನಟನಿಗೂ ಅಕ್ರಮ ಸಂಬಂಧವಿದೆ ಎಂದು ಹೇಳುವ ಮೂಲಕ ಅವರು ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ’ ಎಂದು 23 ವರ್ಷದ ನಟಿ ದೂರಿದ್ದಾರೆ.
‘ಇತ್ತೀಚೆಗೆ ನಾಯಕ ನಟನಿಗೆ ಕರೆ ಮಾಡಿದ್ದ ರಾಜಶೇಖರ್, ‘ಚಿತ್ರೀಕರಣದ ಸಮಯದಲ್ಲಿ ನಾಯಕ ನಟಿ ಜತೆ ನೀನು ಅಕ್ರಮ ಸಂಬಂಧ ಹೊಂದಿದ್ದೆ. ಅದನ್ನು ಸಾಬೀತುಪಡಿಸಲು ನಾನೇ ಆಕೆಯ ಕನ್ಯತ್ವ ಪರೀಕ್ಷೆ ಮಾಡಿಸುತ್ತೇನೆ’ ಎಂದು ಹೇಳಿದ್ದರು. ರಾಜಶೇಖರ್ ಹೇಳಿದ ಈ ಮಾತನ್ನು ನಾಯಕ ನಟ ಡಿ.25ರಂದು ನನ್ನ ಗಮನಕ್ಕೆ ತಂದರು.’
‘ಅಷ್ಟು ಕೀಳಾಗಿ ಮಾತನಾಡಿದ್ದರ ಬಗ್ಗೆ ವಿಚಾರಿಸಲು ನಾನೇ ಅವರಿಗೆ ಕರೆ ಮಾಡಿದೆ. ಆಗ, ‘ಹೌದು. ನಾನು ಹಾಗೆ ಹೇಳಿದ್ದು ನಿಜ. ನೀವಿಬ್ಬರೂ ಹಾಗೆಯೇ ನಡೆದುಕೊಂಡಿದ್ದೀರಿ. ನಾನು ಮಾಡುತ್ತಿರುವ ಆರೋಪ ಸುಳ್ಳೆಂದು ವಾದಿಸುವುದಾದರೆ, ನನ್ನ ಮುಂದೆ ಬಂದು ಕನ್ಯತ್ವ ಪರೀಕ್ಷೆ ಮಾಡಿಸು’ ಎಂದರು. ತುಂಬ ಕೆಟ್ಟ ಪದಗಳಿಂದ ನಿಂದಿಸಿ ಕರೆ ಸ್ಥಗಿತಗೊಳಿಸಿದರು. ಆ ನಂತರವೂ ಅಂತಹುದೇ ಸಂದೇಶಗಳನ್ನು ಕಳುಹಿಸಿದ್ದರು’ ಎಂದು ನಟಿ ಆರೋಪಿಸಿದ್ದಾರೆ.
‘ಮಹಿಳೆ ಗೌರವಕ್ಕೆ ಧಕ್ಕೆ ತಂದ, ಹಾಗೂ ಜೀವ ಬೆದರಿಕೆ ಹಾಕಿದ ಆರೋಪಗಳಡಿ ಎಫ್ಐಆರ್ ದಾಖಲಿಸಿ, ಡಿ.26ರಂದೇ ರಾಜಶೇಖರ್ ಅವರನ್ನು ಬಂಧಿಸಿದ್ದೆವು’ ಎಂದು ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.