ಬೆಂಗಳೂರು : ಚನ್ನೇನಹಳ್ಳಿ ಗ್ರಾಮ ಪಂಚಾಯ್ತಿಯ ಯಲಚಗುಪ್ಪೆ ಗ್ರಾಮಕ್ಕೆ ಹೊಂದಿಕೊಂಡಿರುವ ಬಸಪ್ಪನಕಟ್ಟೆ ಕೆರೆಯ ಸುತ್ತ ಕಟ್ಟಡ ತ್ಯಾಜ್ಯ ಸುರಿಯಲಾಗಿದೆ.
‘ಕೆರೆಯನ್ನು ಒತ್ತುವರಿ ಮಾಡುವ ಸಲುವಾಗಿ ತ್ಯಾಜ್ಯ ಸುರಿಯಲಾಗುತ್ತಿದೆ. ಈ ವಿಚಾರವನ್ನು ಗಮನಕ್ಕೆ ತಂದಿದ್ದರೂ ಕಂದಾಯ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳು ಈ ಕೃತ್ಯವನ್ನು ತಡೆಯಲು ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಗ್ರಾಮದ ಹೊರ ವಲಯದಲ್ಲಿ ಖಾಸಗಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಅಲ್ಲಿ ಕಾಮಗಾರಿ ನಡೆಸುವಾಗ ಸಿಕ್ಕಿದ ಭಾರಿ ಗಾತ್ರದ ಬಂಡೆ ಕಲ್ಲುಗಳನ್ನು ತಂದು ಕೆರೆ ಅಂಗಳದಲ್ಲಿ ಹಾಕಿದ್ದಾರೆ. ಕೆರೆಯ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ. ಇದನ್ನು ಈ ಹಂತದಲ್ಲೇ ತಡೆಯದಿದ್ದರೆ ಕೆರೆ ಕ್ರಮೇಣ ಕಣ್ಮರೆ ಆಗಲಿದೆ’ ಎಂದು ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದರು.
‘ಸುತ್ತಮುತ್ತಲಿನ ಗ್ರಾಮಗಳ ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಏಕೈಕ ಕೆರೆ ಇದಾಗಿದೆ. ಈ ಜಲಮೂಲವೇ ಇಲ್ಲವಾದರೆ ಭವಿಷ್ಯದಲ್ಲಿ ಪಶು ಪಕ್ಷಿಗಳು ನೀರಿಗಾಗಿ ಹಾಹಾಕಾರ ಪಡಬೇಕಾಗುತ್ತದೆ’ ಎಂದರು.
ಅಂತರ್ಜಲಕ್ಕೂ ಕುತ್ತು: ‘ಈಗ ಪ್ರತಿ ಮಳೆಗಾಲದಲ್ಲೂ ಕೆರೆ ಭರ್ತಿ ಆಗುತ್ತಿದೆ. ಇದರಲ್ಲಿ ನೀರು ಸಂಗ್ರಹವಾಗದಿದ್ದರೆ ಅಂತರ್ಜಲದ ಮಟ್ಟವೂ ಕುಸಿಯಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.