ಬೆಂಗಳೂರು: ಹೆಣ್ಣೂರಿನ ಚೇಳಕೆರೆ ಸಮೀಪದ ಕೆರೆಯ ಜಾಗದಲ್ಲಿ ಭಾನುವಾರ ಶ್ವೇತಾ (11) ಎಂಬ ಬಾಲಕಿಯ ಅಂತ್ಯಕ್ರಿಯೆ ನಡೆಸಲು ಮುಂದಾದ ಪೋಷಕರಿಗೆ ಸ್ಥಳೀಯರು ಅಡ್ಡಿಪಡಿಸಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಹೆಣ್ಣೂರು ಸಮೀಪದ ಎಂ.ಎಂ.ಗಾರ್ಡನ್ ನಿವಾಸಿ ಶ್ರೀನಿವಾಸ್ ಎಂಬುವರ ಮಗಳಾದ ಶ್ವೇತಾ ಕ್ಯಾನ್ಸರ್ನಿಂದಾಗಿ ಶನಿವಾರ ರಾತ್ರಿ ಮೃತಪಟ್ಟಿದ್ದಳು.
ಆಕೆಯ ಕುಟುಂಬ ಸದಸ್ಯರು ಕೆರೆಯ ಜಾಗದಲ್ಲಿ ಬೆಳಿಗ್ಗೆ ಅಂತ್ಯಕ್ರಿಯೆ ನಡೆಸಲು ಬಂದಿದ್ದರು. ಈ ವೇಳೆ ಸ್ಥಳೀಯರು ಆ ಜಾಗದಲ್ಲಿ ಅಂತ್ಯಕ್ರಿಯೆಗೆ ಅವಕಾಶ ನೀಡುವುದಿಲ್ಲ ಎಂದು ಕುಟುಂಬ ಸದಸ್ಯರಿಗೆ ಅಡ್ಡಿಪಡಿಸಿದ್ದಾರೆ. ಹೀಗಾಗಿ ಪರಸ್ಪರರ ನಡುವೆ ವಾಗ್ವಾದ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನ್ಯಜಾತಿಯ ಕಾರಣಕ್ಕೆ ಅಡ್ಡಿ |
---|
ಸುಮಾರು 30 ವರ್ಷಗಳಿಂದ ಎಂ.ಎಂ.ಗಾರ್ಡನ್ನಲ್ಲಿ ವಾಸ ವಿದ್ದೇವೆ. ಈ ಹಿಂದೆ ಮೃತಪಟ್ಟ ಕುಟುಂಬದ ಹಲವು ಸದಸ್ಯರ ಅಂತ್ಯಕ್ರಿಯೆಯನ್ನು ಕೆರೆಯ ಜಾಗ ದಲ್ಲೇ ನಡೆಸಿದ್ದೇವೆ. ನಾವು ಅನ್ಯ ಜಾತಿಗೆ ಸೇರಿದವರು ಎಂಬ ಕಾರ ಣಕ್ಕೆ ಸ್ಥಳೀಯರು ಅಂತ್ಯಕ್ರಿಯೆಗೆ ಅಡ್ಡಿಪಡಿಸಿದರು ಎಂದು ಶ್ವೇತಾಖ ಚಿಕ್ಕಮ್ಮ ದೇವಿ ಹೇಳಿದ್ದಾರೆ. |
ಸ್ಥಳೀಯರು ಕೆರೆಯ ಪಕ್ಕದಲ್ಲೇ ಇರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸುವಂತೆ ಹೇಳಿದ್ದಾರೆ. ಆದರೆ, ಅದಕ್ಕೆ ಒಪ್ಪದ ಕುಟುಂಬ ಸದಸ್ಯರು ಠಾಣೆಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ತೆರಳಿ ಪರಸ್ಪರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದೆವು. ನಂತರ ಶ್ವೇತಾ ಪೋಷಕರು ತಮ್ಮ ಹುಟ್ಟೂರಾದ ತಮಿಳುನಾಡಿನ ಕೃಷ್ಣಗಿರಿಗೆ ಶವ ಕೊಂಡೊಯ್ದರು ಎಂದು ಪೊಲೀಸರು ಹೇಳಿದ್ದಾರೆ.
ಶ್ವೇತಾ ಕುಟುಂಬ ಸದಸ್ಯರು ಅಂತ್ಯಕ್ರಿಯೆ ನಡೆಸಲು ಹೋಗಿದ್ದ ಜಾಗವನ್ನು ಕೆಲ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಬೆಂಬಲಿಗರು ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.