ಬೆಂಗಳೂರು: ಹೆಚ್ಚು ಹೊಗೆ ಉಗುಳುತ್ತಿದ್ದ ಸಾರಿಗೆ ನಿಗಮಗಳ ಆರು ಬಸ್ಗಳ ‘ಸಾಮರ್ಥ್ಯ ಪ್ರಮಾಣಪತ್ರ’ ವನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ಸೋಮವಾರ ರದ್ದುಪಡಿಸಿದರು.
‘ಮೆಜೆಸ್ಟಿಕ್ ನಿಲ್ದಾಣದಲ್ಲಿ ಬೆಳಿಗ್ಗೆ ವಿಶೇಷ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡವು 50ಕ್ಕೂ ಹೆಚ್ಚು ಬಸ್ಗಳ ಮಾಲಿನ್ಯ ತಪಾಸಣೆ ನಡೆಸಿತು. ಈ ವೇಳೆ ಬಿಎಂಟಿಸಿಯ ಐದು ಬಸ್ಗಳು ಹಾಗೂ ಕೆಎಸ್ಆರ್ಟಿಸಿಯ ಒಂದು ಬಸ್ ಹೆಚ್ಚು ಮಾಲಿನ್ಯ ಉಂಟು ಮಾಡುತ್ತಿರುವುದು ಕಂಡುಬಂತು. ಹೀಗಾಗಿ ಆ ಬಸ್ಗಳ ಸಾಮರ್ಥ್ಯ ಪ್ರಮಾಣಪತ್ರವನ್ನು ರದ್ದುಪಡಿಸಲಾಯಿತು’ ಎಂದು ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಜ್ಞಾನೇಂದ್ರ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಆ ಆರು ಬಸ್ಗಳ ಪೈಕಿ ಮಾರ್ಕೊಪೊಲೊ ಹಾಗೂ 2005ರ ಮಾಡೆಲ್ ಬಸ್ಗಳು ಸಹ ಇವೆ. ಇವು ಹೆಚ್ಚು ಹೊಗೆ ಉಗುಳುವ ಜತೆಗೆ ತಾಂತ್ರಿಕ ದೋಷದಿಂದಲೂ ಕೂಡಿರುವುದು ತಪಾಸಣೆ ವೇಳೆ ಗೊತ್ತಾಯಿತು.’
‘ಈ ಎಲ್ಲ ಬಸ್ಗಳನ್ನು ದುರಸ್ತಿ ಮಾಡಿಸಿ, ಮಾಲಿನ್ಯ ತಪಾಸಣೆ ನಡೆಸಿದ ಬಳಿಕ ಸಾರಿಗೆ ಪ್ರಾಧಿಕಾರದಿಂದ ಸಾಮರ್ಥ್ಯ ಪ್ರಮಾಣಪತ್ರವನ್ನು ಪಡೆಯಬೇಕು. ನಂತರ ವಾಹನವನ್ನು ಬಳಕೆ ಮಾಡಬಹುದು’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.