ಬೆಂಗಳೂರು: ‘ಬೆಂಗಳೂರು ಹಾಗೂ ಗದಗದಲ್ಲಿ ರೆಡಾರ್ ಸ್ಥಾಪಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ’ ಎಂದು ಹವಾಮಾನ ಇಲಾಖೆಯ ಹವಾಮಾನ ತಜ್ಞ ರಾಜಾ ರಮೇಶ್ ಹೇಳಿದರು.
ದಿ ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರಿಂಗ್ (ಇಂಡಿಯಾ) ನಗರದಲ್ಲಿ ಬುಧವಾರ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
‘ಚೆನ್ನೈನ ರೆಡಾರ್ ಮಾಹಿತಿ ಆಧರಿಸಿ ಬೆಂಗಳೂರಿನಲ್ಲಾಗುವ ಮಳೆಯ ಬಗ್ಗೆ ಮೂನ್ಸೂಚನೆ ನೀಡಲಾಗುತ್ತಿದೆ. ಆದರೆ, 300 ಕಿ.ಮೀ.ಗಿಂತ ದೂರದ ಸ್ಥಳಗಳ ಹವಾಮಾನ ಬದಲಾವಣೆಯನ್ನು ನಿಖರವಾಗಿ ಗ್ರಹಿಸಲು ರೆಡಾರ್ಗಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ, ರಾಜ್ಯದ ಕೆಲವಡೆ ಇವುಗಳನ್ನು ಸ್ಥಾಪಿಸಿದರೆ ಹವಾಮಾನ ಬದಲಾವಣೆ ಬಗ್ಗೆ ರೈತರಿಗೆ ನಿಖರವಾದ ಮಾಹಿತಿ ನೀಡಬಹುದು’ ಎಂದರು.
ಕೆಳ, ಮಧ್ಯಮ ಹಾಗೂ ಎತ್ತರ ಹಂತಗಳಲ್ಲಿ ಮೋಡಗಳನ್ನು ವರ್ಗೀಕರಣ ಮಾಡಲಾಗಿದೆ. ಕೆಳ ಹಂತದ ಮೋಡಗಳು ಹೆಚ್ಚು ಮಳೆ ಸುರಿಸುತ್ತವೆ. ನಿಂಬಸ್ ಎಂಬ ಮೋಡಗಳಿಂದ ಭಾರಿ ಮಳೆ ಉಂಟಾಗುತ್ತದೆ. ಸಿಡಿಲುಹಾಗೂ ಗುಡುಗು ಸಂಭವಿಸುವುದು ಇದೇ ಮೋಡಗಳಿಂದಾಗಿ ಎಂದರು.
‘ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಹವಾಮಾನ ಮೇಲ್ವಿಚಾರಣೆ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಶೀಘ್ರವೇ ಅದು ಕಾರ್ಯರೂಪಕ್ಕೆ ಬರಲಿದೆ’ ಎಂದರು.
ಮಳೆಮಾಪನಾ ಕೇಂದ್ರಗಳನ್ನು ಗ್ರಾಮ ಪಂಚಾಯಿತಿ ಕಚೇರಿ ಬಳಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಆವರಣದಲ್ಲಿ ಸಾಮಾನ್ಯ
ವಾಗಿ ಸ್ಥಾಪಿಸಲಾಗುತ್ತದೆ. ಆದರೆ, ಸ್ಥಳೀಯರ ಲಾಬಿಯಿಂದಾಗಿ ಅವುಗಳನ್ನು ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳಾಂತರಕ್ಕೆ ಹಣದ ಕೊರತೆಯೂ ಎದುರಾಗುತ್ತಿದೆ. ಹೀಗಾಗಿ, ಇಂಥ ಸಮಸ್ಯೆಗಳು ನಿವಾರಣೆಯಾಗಬೇಕಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.