ಬೆಂಗಳೂರು: ಪ್ರಕೃತಿ ವೈಪರೀತ್ಯದಿಂದ ಮಾವಿನ ಗಿಡ ಹೂವು ಬಿಡಲು ಈ ವರ್ಷ ತಡವಾಗಿದೆ. ಮಾವು ಬಲಿಯಲು ಇನ್ನೂ ಸಾಕಷ್ಟು ಕಾಲ ಬೇಕಿರುವ ಹಿನ್ನೆಲೆಯಲ್ಲಿ ಮಾವು ಮಾರುಕಟ್ಟೆ ಕೇಂದ್ರವನ್ನು ಮೇ 20ರಂದು ಪ್ರಾರಂಭಿಸಲಾಗುವುದು ಎಂದು ಕರ್ನಾಟಕ ಸಾವಯವ ಕೃಷಿ ಉತ್ಪಾದಕರ ಸೊಸೈಟಿ ತಿಳಿಸಿದೆ.
ಮಂಗಳವಾರ ಇಲ್ಲಿ ಈ ವಿಷಯ ತಿಳಿಸಿದ ಸೊಸೈಟಿಯ ಅಧ್ಯಕ್ಷ ಬಿ.ಎಂ.ವಿಶ್ವನಾಥ ರೆಡ್ಡಿ, ‘ಮಾವಿನ ಮರ ಹೂ ಬಿಟ್ಟಿದ್ದೇ ತಡವಾಗಿ. ಹೀಗಾಗಿ ಈ ಬಾರಿ ಫಸಲು ತಡವಾಗಿ ಬರುತ್ತದೆ. ಈಗ ಮಾರುಕಟ್ಟೆಯಲ್ಲಿರುವ ಮಾವಿನ ಹಣ್ಣುಗಳು ಕಾರ್ಬೈಡ್ಗಳನ್ನು ಬಳಸಿ ಕೃತಕವಾಗಿ ಮಾಗಿಸಿದ್ದು. ಬೆಲೆಯೂ ಹೆಚ್ಚಿದೆ’ ಎಂದರು.
ಬೆಳೆ ತಡವಾಗಿ ಬಂದಿರುವುದು ಹಾಗೂ ಚುನಾವಣಾ ಹಿನ್ನೆಲೆಯಲ್ಲಿ ನಗದು ವಹಿವಾಟಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮಾವು ಮಾರುಕಟ್ಟೆ ಕೇಂದ್ರವನ್ನು ಒಂದು ತಿಂಗಳು ತಡವಾಗಿ ಪ್ರಾರಂಭಿಸಲಾಗುವುದು. ಕೇಂದ್ರವು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಪ್ರಾರಂಭಗೊಳ್ಳಲಿದೆ.
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ದಾವಣೆಗೆರೆ, ರಾಮನಗರ, ಅನಂತಪುರ, ಚಿತ್ತೂರು, ಕಡಪ, ಸೇಲಂನ ಮಾವು ಬೆಳೆಗಾರರು ಭಾಗವಹಿಸುವರು ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.