ಬೆಂಗಳೂರು: ಕಪ್ಪು ಬ್ಯಾಡ್ಜ್ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸುತ್ತಿರುವ ಸಿಬ್ಬಂದಿಗೆ ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಬಿಎಂಆರ್ಸಿಎಲ್ ನೌಕರರ ಸಂಘ ದೂರಿದೆ.
‘ನಮ್ಮ ಮೆಟ್ರೊ ಸೇವೆ ಸ್ಥಗಿತಗೊಳಿಸಿ ಇದೇ ಮಾರ್ಚ್ 22ರಿಂದಮುಷ್ಕರ ನಡೆಸುವುದಾಗಿ ಮಾ. 7ರಂದು ನೋಟಿಸ್ ನೀಡಿದ್ದೆವು. ಅಲ್ಲಿಯವರೆಗೆ ಕಪ್ಪು ಬ್ಯಾಡ್ಜ್
ಧರಿಸಿ ಪ್ರತಿಭಟನೆ ನಡೆಸುವ ಬಗ್ಗೆಯೂ ಮಾಹಿತಿ ನೀಡಿದ್ದೆವು. ಕಪ್ಪು ಬ್ಯಾಡ್ಜ್ ಧರಿಸದಂತೆ ನಿಗಮದ ಬೈಯಪ್ಪನಹಳ್ಳಿ ಹಾಗೂ ಪೀಣ್ಯದ ಸಿಬ್ಬಂದಿ ನಿಯಂತ್ರಣ ಘಟಕದಲ್ಲಿ ಅಧಿಕಾರಿಗಳು ರೈಲು ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ’ ಎಂದು ಸಂಘದ ಉಪಾಧ್ಯಕ್ಷ ಎಸ್.ಮಂಜುನಾಥ್ ತಿಳಿಸಿದರು.
ಕರ್ತವ್ಯ ನಿರ್ವಹಣೆ ವೇಳೆ ಸಿಬ್ಬಂದಿಯು ಮೆಟ್ರೊ ರೈಲು ಆಡಳಿತ ಮಂಡಳಿ ಸೂಚಿಸಿದ ಬ್ಯಾಡ್ಜ್ ಹಾಗೂ ಸಮವಸ್ತ್ರವನ್ನು ಮಾತ್ರ ಧರಿಸಬೇಕು. ಅಚ್ಚುಕಟ್ಟಾಗಿ ಹಾಗೂ ಶಿಸ್ತಿನಿಂದ ಇರಬೇಕು ಎಂದು ರೈಲು ಸಂಚಾರ ನಿರ್ವಹಣೆ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಅಮುತನ್ ಅವರ ಸಹಿ ಇರುವ ಜ್ಞಾಪನಾಪತ್ರವನ್ನು
ಈ ಘಟಕಗಳ ಸೂಚನಾ ಫಲಕದಲ್ಲಿ ಅಂಟಿಸಲಾಗಿದೆ.
‘ಮಾತುಕತೆಗೆ ನಿಗಮ ಸಿದ್ಧವಿಲ್ಲವಾದರೆ ಇದೇ 22ರಿಂದ ಮೆಟ್ರೊ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಅನಿವಾರ್ಯ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.