ಧಾರವಾಡ: ಖಾತಾ ಬದಲಾವಣೆ ಮಾಡಿಕೊಡಲು ಲಂಚ ಕೇಳಿದ್ದ ಕುಷ್ಟಗಿ ತಹಶೀಲ್ದಾರರಿಗೆ 5 ವರ್ಷ ಶಿಕ್ಷೆ, ಮತ್ತು ಅದಕ್ಕೆ ಸಹಾಯ ಮಾಡಿದ್ದ ವ್ಯಕ್ತಿಗೆ 3 ವರ್ಷ ಶಿಕ್ಷೆ ವಿಧಿಸಿ ಇಲ್ಲಿನ ಹೈಕೋರ್ಟ್ ತೀರ್ಪು ನೀಡಿದೆ.
2010ರಲ್ಲಿ ಕುಷ್ಟಗಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರ್ ಮಾರೆಪ್ಪ ಅದೇ ತಾಲ್ಲೂಕಿನ ಹನಮಸಾಗರದ ಶ್ಯಾಮಣ್ಣ ಮಾದರ ಎನ್ನುವವರಿಗೆ ಸರ್ಕಾರ ನೀಡಿದ್ದ ಸಾಗುವಳಿ ಹಕ್ಕು ಪತ್ರವನ್ನು ಪರಿಗಣಿಸಿ ಖಾತಾ ಬದಲಾವಣೆ ಮಾಡಿಕೊಡಲು ₹ 10 ಸಾವಿರ ಲಂಚ ಕೇಳಿದ್ದರು ಎನ್ನಲಾಗಿದೆ. ಈ ಹಣವನ್ನು ತಮ್ಮ ಸಹಾಯಕ ವೀರೇಶ ಎನ್ನುವವರಿಗೆ ನೀಡುವಂತೆ ಸೂಚಿಸಿದ್ದರು.
ಈ ಕುರಿತು ಶ್ಯಾಮಣ್ಣ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಅದರನ್ವಯ ಹಣ ನೀಡುವಾಗ ದಾಳಿ ನಡೆಸಿ, ಹಣ ವಶಪಡಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಪ್ರಕರಣದ ಕುರಿತು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಕೊಪ್ಪಳ ನ್ಯಾಯಾಲಯ ಇಬ್ಬರನ್ನೂ ನಿರ್ದೋಷಿಗಳೆಂದು ತೀರ್ಮಾನಿಸಿ ಬಿಡುಗಡೆ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.