ಬೆಂಗಳೂರು: ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಕೆಗೆ ಆನ್ಲೈನ್ ಮೂಲಕ ಅರ್ಜಿ ಸ್ವೀಕಾರ ಮಾಡಲು ಜಲಮಂಡಳಿ ಸಿದ್ಧತೆ ನಡೆಸಿದೆ. ಇಲ್ಲಿನ ನಿವಾಸಿಗಳು ನೀರಿನ ಸಂಪರ್ಕ ಪಡೆಯಲು ಆರಂಭಿಕ ಹಂತದಲ್ಲಿ ಫಲಾನುಭವಿ ವಂತಿಗೆ (ಬಿಸಿಸಿ) ಪಾವತಿಸಬೇಕಿದೆ.
‘ಇಲ್ಲಿನ ನಿವಾಸಿಗಳಿಗೆ ಮುಂದಿನ ದಿನಗಳಲ್ಲಿ ಆನ್ಲೈನ್ ಅರ್ಜಿ ನಮೂನೆಗಳು ಲಭ್ಯವಾಗಲಿವೆ. ಅದನ್ನು ಭರ್ತಿ ಮಾಡಿ ಸಲ್ಲಿಸಬೇಕು. ಆನ್ಲೈನ್ ಮೂಲಕವೇ ಫಲಾನುಭವಿ ವಂತಿಗೆಯನ್ನು ಪಾವತಿಸಬಹುದು’ ಎಂದು ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ ತಿಳಿಸಿದರು.
‘ಹೊಸ ವಿಭಾಗಗಳು ಹಾಗೂ ಉಪವಿಭಾಗಗಳ ಸೇರ್ಪಡೆಗೆ ಅನುವು ಮಾಡಿಕೊಡಲು ಕಂದಾಯ ಪಾವತಿಯ ಸಾಫ್ಟ್ವೇರ್ನ ಪರಿಷ್ಕರಣೆ ಮಾಡುವಂತೆ ವಿಭಾಗ ಹಾಗೂ ಉಪವಿಭಾಗಗಳ ಎಂಜಿನಿಯರ್ಗಳಿಗೆ ಸೂಚಿಸಿ ಇತ್ತೀಚೆಗೆ ಸುತ್ತೋಲೆ ಹೊರಡಿಸಿದ್ದೇನೆ. ನೀರಿನ ಸಂಪರ್ಕ ನೀಡುವ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದ್ದೇನೆ. ಆದರೆ, ಜನರು ಶುಲ್ಕ ಪಾವತಿಸಿ ಭರ್ತಿ ಮಾಡಿದ ಅರ್ಜಿ ಸಲ್ಲಿಸಿದ ಬಳಿಕವೇ ಪ್ರಕ್ರಿಯೆ ಆರಂಭವಾಗಲಿದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.