ADVERTISEMENT

‘ನಗರದ ವಿವಿಧ ಭಾಗಗಳಲ್ಲಿ ನಿಮ್ಹಾನ್ಸ್‌ನ ಕೇಂದ್ರ ತೆರೆಯಿರಿ’

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST
ಸಮ್ಮೇಳನದಲ್ಲಿ ಡಾ. ಎಸ್‌.ಎಸ್‌.ಹರ್‍ಸೂರ್‌, ಡಾ.ಕೆ.ಎಸ್‌. ರವೀಂದ್ರನಾಥ್‌, ನಿಮ್ಹಾನ್ಸ್‌ನ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್‌ ಇದ್ದಾರೆ
ಸಮ್ಮೇಳನದಲ್ಲಿ ಡಾ. ಎಸ್‌.ಎಸ್‌.ಹರ್‍ಸೂರ್‌, ಡಾ.ಕೆ.ಎಸ್‌. ರವೀಂದ್ರನಾಥ್‌, ನಿಮ್ಹಾನ್ಸ್‌ನ ನಿರ್ದೇಶಕ ಡಾ.ಬಿ.ಎನ್‌.ಗಂಗಾಧರ್‌ ಇದ್ದಾರೆ   

ಬೆಂಗಳೂರು: ‘ರಸ್ತೆ ಅಪಘಾತಗಳಲ್ಲಿ ಗಾಯಗೊಳ್ಳುವ ವ್ಯಕ್ತಿಗಳ ಅನುಕೂಲಕ್ಕಾಗಿ ನಗರದ ವಿವಿಧ ಭಾಗಗಳಲ್ಲಿ ನಿಮ್ಹಾನ್ಸ್‌ನ ಕೇಂದ್ರಗಳನ್ನು ತೆರೆಯಬೇಕಿದೆ’ ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಎಸ್‌.ರವೀಂದ್ರನಾಥ್‌ ಹೇಳಿದರು.

ನಿಮ್ಹಾನ್ಸ್‌ನ ಕನ್‌ವೆನ್ಷನ್‌ ಸೆಂಟರ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ‘ಇಂಡಿಯನ್‌ ಸೊಸೈಟಿ ಆಫ್‌ ನ್ಯೂರೋಅನೆಸ್ತೇಸಿಯಾಲಜಿ ಅಂಡ್‌ ಕ್ರಿಟಿಕಲ್‌ ಕೇರ್‌’ನ 17ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಅಪಘಾತಗಳಲ್ಲಿ ತಲೆಗೆ ತೀವ್ರವಾಗಿ ಪೆಟ್ಟಾದ ವ್ಯಕ್ತಿಗಳನ್ನು ನಿಮ್ಹಾನ್ಸ್‌ಗೆ ಕ್ಷಿಪ್ರವಾಗಿ ಕರೆತರಲು ಸಂಚಾರ ದಟ್ಟಣೆ ಸಮಸ್ಯೆಯಿಂದ ಸಾಧ್ಯವಾಗುವುದಿಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ಗಾಯಾಳು ಶಾಶ್ವತವಾಗಿ ವೈಕಲ್ಯಕ್ಕೆ ತುತ್ತಾಗಬೇಕಾಗುತ್ತದೆ’ ಎಂದು ಹೇಳಿದರು.

‘ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಜನರ ಪ್ರಮಾಣ ಇಂದು ಕಡಿಮೆ ಆಗುತ್ತಿದೆ. ಸಾಂಕ್ರಾಮಿಕವಲ್ಲದ ಕ್ಯಾನ್ಸರ್‌, ಮಧುಮೇಹ, ಅಪಘಾತಗಳಿಂದ ತೀವ್ರವಾಗಿ ಗಾಯಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳಿದರು.

‘ಅರಿವಳಿಕೆ ವಿಜ್ಞಾನ ಸಂಶೋಧನೆಗೆ ಸಂಬಂಧಿಸಿದಂತೆ ವಿದೇಶಿ ಮಾರ್ಗದರ್ಶಿ ಸೂತ್ರಗಳಿಗೆ ಅವಲಂಬನೆ ಆಗಿದ್ದೇವೆ. ಅಲ್ಲಿನ ಚಿಕಿತ್ಸಾ ವಿಧಾನಗಳನ್ನೇ ನಾವೂ ಅನುಸರಿಸುತ್ತಿದ್ದೇವೆ. ಇದು ಬದಲಾಗಬೇಕು. ನಮ್ಮದೇ ಆದ ಮಾರ್ಗದರ್ಶಿ ನಿಯಮಗಳನ್ನು ಕಂಡುಕೊಳ್ಳಬೇಕು’ ಎಂದು ಹೇಳಿದರು.

‘ಅರಿವಳಿಕೆ ತಜ್ಞರಿಗೆ ಎಂಆರ್‌ಐ, ಸಿಟಿ ಸ್ಕ್ಯಾನ್‌ ಬಗ್ಗೆ ಅರಿವು ಇರಬೇಕು. ತುರ್ತು ಸಂದರ್ಭದಲ್ಲಿ ಇಮೇಜಿಂಗ್‌ ತಂತ್ರಜ್ಞಾನ ಬಳಸಿ ರೋಗಿಗೆ ಉತ್ತಮ ಚಿಕಿತ್ಸೆ ನೀಡಬೇಕು’ ಎಂದರು.

ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕ ಡಾ. ಎಸ್‌.ಎಸ್‌.ಹರ್‍ಸೂರ್‌ ಮಾತನಾಡಿ, ‘ರೋಗಿಗೆ ಶಸ್ತ್ರಚಿಕಿತ್ಸೆ ಮಾಡುವ ಸಂದರ್ಭದಲ್ಲಿ ಅರಿವಳಿಕೆ ತಜ್ಞರ ಅಗತ್ಯವಿರುತ್ತದೆ. ಕೆಲವೊಮ್ಮೆ ಅರಿವಳಿಕೆ ತಜ್ಞರ ಕೊರತೆ ಸಂದರ್ಭದಲ್ಲಿ ಮತ್ತೊಬ್ಬರು ಸಹಾಯಕ್ಕೆ ಬರಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.