ADVERTISEMENT

‘ಮಕ್ಕಳಿಗಾಗಿ ಸಾಹಿತ್ಯ ರಚಿಸಲಿ’

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2014, 20:11 IST
Last Updated 16 ನವೆಂಬರ್ 2014, 20:11 IST

ಬೆಂಗಳೂರು: ‘ಬಂಗಾಳಿ ಸಾಹಿತಿಗಳಂತೆ ಕನ್ನಡ ಸಾಹಿತಿಗಳು ಕೂಡ ಮಕ್ಕಳಿ­ಗಾಗಿ ಸಾಹಿತ್ಯ ರಚಿಸಬೇಕು’ ಎಂದು ಸಾಹಿತಿ ಚಂದ್ರಶೇಖರ ಕಂಬಾರ ಹೇಳಿದರು. ಸಾಹಿತ್ಯ ಅಕಾಡೆಮಿ ಕನ್ನಡ ಭವನದ ನಯನ ಸಭಾಂಗಣದಲ್ಲಿ  ಭಾನುವಾರ ಆಯೋಜಿಸಿದ್ದ ‘ಮಕ್ಕಳ ಸಾಹಿತ್ಯ: ಹೊಸ ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

‘ಮಕ್ಕಳಿಗೆ ಜಗತ್ತಿನ ಎಲ್ಲಾ ಬಗೆಯ ಜ್ಞಾನ ಕನ್ನಡದಲ್ಲಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಕನ್ನಡದ ಸಾಹಿತಿಗಳು ಪ್ರಯತ್ನಿಸಬೇಕಾಗಿದೆ. ಬಂಗಾಳಿ ಸಾಹಿತಿ­ಗಳು ಮಕ್ಕಳಿಗಾಗಿ ಕನಿಷ್ಠ ಒಂದೆರೆಡು ಪುಸ್ತಕ­ಗಳನ್ನಾದರೂ ಬರೆ­ಯುವ ಪರಂ­ಪರೆ­ಯನ್ನು ತುಂಬಾ ಹಿಂದಿ­ನಿಂ­ದಲೂ ಅನುಸರಿಸಿಕೊಂಡು ಬರು­ತ್ತಿದ್ದಾರೆ. ಈ ಬಗ್ಗೆ ಅವರಲ್ಲಿ ಅಪಾರವಾದ ಬದ್ಧತೆ ಇದೆ. ಅದರಂತೆ ಅಸ್ಸಾಂನ ಬರಹ­ಗಾರ­ರೊ­ಬ್ಬರು ಅಸ್ಸಾಮಿ ಭಾಷೆಯಲ್ಲಿ 50ಕ್ಕೂ ಹೆಚ್ಚು ವಿಜ್ಞಾನದ ಪುಸ್ತಕಗಳನ್ನು ಬರೆದಿದ್ದಾರೆ’ ಎಂದರು.

‘ಕನ್ನಡದಲ್ಲಿ ಕುವೆಂಪು ಅವರನ್ನು ಹೊರತುಪಡಿಸಿದರೆ ಕನ್ನಡದ ಬೇರಾ­ವುದೇ ಸಾಹಿತಿಗಳು ಮಕ್ಕಳಿಗಾಗಿ ಕೃತಿ­ಗ­ಳನ್ನು ರಚಿಸುವ ಬದ್ಧತೆ ತೋರಿಲ್ಲ. ಆದ್ದ­ರಿಂದ, ಕನ್ನಡದ ಸಾಹಿತಿಗಳು ಕೂಡ ಮಕ್ಕ­ಳಿ­ಗಾಗಿ ಕನ್ನಡದಲ್ಲಿ ವಿಜ್ಞಾನ ಪುಸ್ತಕ­ಗಳನ್ನು ಬರೆಯುವ ಬದ್ಧತೆ ಹಾಗೂ ಕ್ರಿಯಾಶೀಲತೆಯನ್ನು ಮೈಗೂ­ಡಿ­ಸಿಕೊಳ್ಳಬೇಕಿದೆ’ ಎಂದು ಹೇಳಿದರು.

‘ವಿಜ್ಞಾನದ ವಿಶ್ವಕೋಶದ ಜತೆಗೆ ವಿಜ್ಞಾನಗಳ ಪಠ್ಯಪುಸ್ತಕವನ್ನು ಕನ್ನಡದಲ್ಲಿ ನೀಡಿ, ಅವುಗಳನ್ನು ಓದಲೇ ಬೇಕೆಂಬ ಹಂಬಲವನ್ನು ಮಕ್ಕಳಲ್ಲಿ ಮೂಡಿಸಬೇಕು. ಆಗ ಮಾತ್ರ ಮಕ್ಕಳಿಗೆ ವಿಜ್ಞಾನವನ್ನು ತಲುಪಿಸಲು ಸಾಧ್ಯವಾ­ಗುತ್ತದೆ’ ಎಂದು ಸಲಹೆ ನೀಡಿದರು.
ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಮಂಡಳಿ ಸಂಚಾಲಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ‘ಹಿಂದೆ ನಮಗೆಲ್ಲಾ ಮನೆಯಲ್ಲಿ ತಾಯಿ ಶಿಕ್ಷಕಿ­ಯಾಗಿದ್ದರು. ಅದರಂತೆ ಈಗ ಶಾಲೆ­­ಯಲ್ಲಿ ಶಿಕ್ಷಕರು ಮಕ್ಕಳಿಗೆ ತಾಯಿ­ಯಾ­ದಾಗ ಮಾತ್ರ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ದೊರೆಯುವಂತಾಗುತ್ತದೆ’ ಎಂದರು.

‘ಇಂದು ಒತ್ತಡದ ಜಗತ್ತು. ಓದು­ವು­ದ­ರಿಂದ ಹಿಡಿದು ಪ್ರತಿಯೊಂದು ವಿಷ­ಯ­ದಲ್ಲೂ ನಾವು ಒತ್ತಡದಲ್ಲೇ ಬದು­ಕುತ್ತಿದ್ದೇವೆ. ಇಂಥ ಒತ್ತಡದಿಂದ ಮುಕ್ತ­ರಾಗಲು ಸಾಹಿತ್ಯ ಅತ್ಯುತ್ತಮ ಮಾರ್ಗ­ವಾಗಿದೆ. ಹಿಂದೆ ತಾಯಂದಿರು, ಅಜ್ಜಿ­ಯಂ­ದಿರು ಕಥೆ ಹೇಳುವ ಮೂಲಕ ನಮ್ಮ ಅದೆಷ್ಟೋ ಒತ್ತಡಗಳನ್ನು ನಿವಾರಿ­ಸುತ್ತಿದ್ದರು. ಹೀಗಾಗಿ, ಈಗ ಕಥನ ಕಲೆ ಪುನರುತ್ಥಾನಗೊಳ್ಳುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

ಇಂಗ್ಲಿಷ್‌ ಲೇಖಕಿ ಶಶಿ ದೇಶಪಾಂಡೆ ಮಾತನಾಡಿ, ‘ಮಕ್ಕಳಿಗೆ ಕೇವಲ ಕನ್ನಡದ ಪುಸ್ತಕಗಳನ್ನು ಓದಿ ಎಂದು ಹೇಳುವ ಬದಲು, ಅವರಲ್ಲಿ ಓದಲೇ ಬೇಕೆಂಬ ಹಂಬಲ ಮೂಡಿಸುವಂಥ ಕನ್ನಡದ ಪುಸ್ತಕಗಳನ್ನು ಮಕ್ಕಳಿಗಾಗಿ ರಚಿಸಬೇಕಾದ ಅಗತ್ಯವಿದೆ’ ಎಂದು ಸಲಹೆ ನೀಡಿದರು.

‘ಯಾವುದೇ ವಿಷಯದ ಬಗ್ಗೆ ಮಕ್ಕಳಲ್ಲಿ ಕುತೂಹಲವಿರುತ್ತದೆ. ಆ ಕುತೂಹಲವನ್ನು ಹೆಚ್ಚಿಸುವ ಬಗ್ಗೆ ಆಸಕ್ತಿ ವಹಿಸಬೇಕು. ವಯೋಮಿತಿ ಆಧಾರವಾಗಿ ಮಕ್ಕಳಿಗೆ ವಿವಿಧ ಸ್ತರದ ಸಾಹಿತ್ಯವನ್ನು ಒದಗಿಸಬೇಕು. ಇದು ಬಹುದೊಡ್ಡ ಸವಾಲು. ಆದರೆ, ಸಾಹಿತಿಗಳು ಈ ಸವಾಲನ್ನು ಸ್ವೀಕರಿಸಿ, ಸಾಹಿತ್ಯ ರಚಿಸಲು ಮುಂದಾಗಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.