ಯಲಹಂಕ: ಸಮಸಮಾಜದ ಹೆಜ್ಜೆಗಳನ್ನು ಇಡುವ ಹಾದಿಯಲ್ಲಿ ಜಾತಿ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುವುದರಿಂದ ನಾವು ನಮ್ಮ ಸಮುದಾಯಗಳ ಭವಿಷ್ಯವನ್ನು ದೃಢಪಡಿಸಿಕೊಂಡು, ಬೆಳೆಯಲು ಅನಿವಾರ್ಯವಾಗಿ ಜಾತಿಯನ್ನು ಅವಲಂಬಿಸಬೇಕಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅಮೃತಹಳ್ಳಿಯ ಜನತಾ ಕಾಲೋನಿಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಜನಜಾಗೃತಿ ವೇದಿಕೆ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಹಾಗೂ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಾತಿವ್ಯವಸ್ಥೆ ಇಲ್ಲದಿದ್ದರೆ ಪ್ರಜಾಸತ್ತೆ ಉಳಿಯಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ಎಲ್ಲ ಜಾತಿಗಳ ಶೋಷಿತರು ಸಂಘಟಿತ ರಾಗಬೇಕಾದ ಅಗತ್ಯವಿದೆ ಎಂದರು.
ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಯೋಜಕ ಲಕ್ಷ್ಮೀನಾರಾಯಣ ನಾಗವಾರ ಮಾತನಾಡಿ, ‘ನಮ್ಮ ಜಾತಿಗಳಲ್ಲಿರುವ ತಾರತಮ್ಯ ಮತ್ತು ಜಗಳಗಳಿಂದ ನಾವು ಸಮಯ ಹಾಳುಮಾಡಿಕೊಂಡು, ಹಿಂದುಳಿಯು ತ್ತಿದ್ದೇವೆ’ ಎಂದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ನಾರಾಯಣಸ್ವಾಮಿ, ವೇದಿಕೆ ಅಧ್ಯಕ್ಷ ಎ.ಮಂಜುನಾಥ್ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.