ಬೆಂಗಳೂರು: ‘ಕೆರೆಗಳೂ ಸೇರಿದಂತೆ ಬೆಂಗಳೂರು ನಗರದಲ್ಲಿ ಒಟ್ಟು ₨ 2 ಲಕ್ಷ ಕೋಟಿ ಮೌಲ್ಯದ ಭೂಮಿ ಒತ್ತುವರಿಯಾಗಿದ್ದು, ಈ ದೊಡ್ಡ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು’ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದರು.
ವಿಧಾನಸಭೆಯಲ್ಲಿ ಶುಕ್ರವಾರ ನಗರಾಭಿವೃದ್ಧಿ ಇಲಾಖೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಭೂ ಒತ್ತುವರಿ ಪ್ರಕರಣದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ಹೆಸರೂ ಕೇಳಿ ಬಂದಿರುವುದರಿಂದ ರಾಜ್ಯದ ತನಿಖಾ ಸಂಸ್ಥೆಗಳಿಗೆ ಈ ಪ್ರಕರಣವನ್ನು ಯಾವ ಕಾರಣಕ್ಕೂ ಒಪ್ಪಿಸಬಾರದು’ ಎಂದು ಅವರು ಹೇಳಿದರು.
‘ನಿವೃತ್ತ ಐಎಎಸ್ ಅಧಿಕಾರಿ ಎನ್.ಲಕ್ಷ್ಮಣರಾವ್ ನೇತೃತ್ವದ ಸಮಿತಿ 1985ರ ಜೂನ್ 26ರಂದು ನೀಡಿದ ವರದಿ ಪ್ರಕಾರ ಬೆಂಗಳೂರು ನಗರದಲ್ಲಿ 390 ಕೆರೆಗಳಿದ್ದವು. ಈಗ ಅಷ್ಟೊಂದು ಕೆರೆಗಳನ್ನು ಎಲ್ಲಿ ಹುಡುಕುವುದು’ ಎಂದು ಅವರು ಪ್ರಶ್ನಿಸಿದರು. ‘ದಾಖಲೆಗಳಲ್ಲಿರುವ ಕೆರೆಗಳ ವಿಸ್ತೀರ್ಣಕ್ಕೂ ವಾಸ್ತವ ಚಿತ್ರಣಕ್ಕೂ ಅಜ ಗಜಾಂತರ. ಉದಾಹರಣೆಗೆ ಮತ್ತಿಕೆರೆ ಅಂಗಳ 41 ಹೆಕ್ಟೇರ್ ವಿಸ್ತಾರವಾಗಿದೆ ಎಂಬ ಮಾಹಿತಿ ದಾಖಲೆಯಲ್ಲಿದೆ. ಅಲ್ಲಿ ಖಾಸಗಿ ಬಡಾವಣೆ ನಿರ್ಮಾಣವಾಗಿದೆ’ ಎಂದು ತಿಳಿಸಿದರು.
‘ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶದಲ್ಲಿ 40,950.46 ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿದೆ ಎಂದು ಎ.ಟಿ. ರಾಮಸ್ವಾಮಿ ಸಮಿತಿ ವರದಿ ನೀಡಿದೆ. ಗೃಹ ನಿರ್ಮಾಣ ಸಹಕಾರ ಸಂಘಗಳು, ಖಾಸಗಿ ಡೆವಲಪರ್ಗಳು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ ಕುರಿತು ವಿಶೇಷವಾಗಿ ಪ್ರಸ್ತಾಪ ಮಾಡಲಾಗಿದೆ. ಆ ವರದಿಗೆ ಸಂಬಂಧಿಸಿದಂತೆ ಸರ್ಕಾರ ಇದುವರೆಗೆ ಏನು ಕ್ರಮ ಕೈಗೊಂಡಿದೆ’ ಎಂದು ಪ್ರಶ್ನಿಸಿದರು.
‘ಚಾಮರಾಜಪೇಟೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ₨ 15 ಕೋಟಿ ಮೌಲ್ಯದ ಆಸ್ತಿಯನ್ನು ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಲಾಗಿದೆ. ರಾಷ್ಟ್ರೀಯ ಮಾನಸಿಕ ಮತ್ತು ನರರೋಗ ವಿಜ್ಞಾನ ಸಂಸ್ಥೆಯ 100 ಎಕರೆ ಜಾಗವನ್ನು ಬಿಬಿಎಂಪಿ ಅಧಿಕಾರಿಗಳು ಖಾಸಗಿ ಬಿಲ್ಡರ್ಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ’ ಎಂದು ದೂರಿದರು.
‘ಬೈರಸಂದ್ರ ಕೆರೆಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಮೇಲೂ ಬಿಬಿಎಂಪಿ ಆ ಕೆರೆಯ ಹೆಸರಿನಲ್ಲಿ ₨ 1.20 ಕೋಟಿ ಖರ್ಚು ಮಾಡಿದೆ. ಸಸಿಗಳನ್ನು ನೆಡಲಾಗಿದೆ ಎಂಬ ದಾಖಲೆ ಬಿಬಿಎಂಪಿಯಲ್ಲಿ ಇದ್ದರೂ ಕೆರೆ ದಂಡೆ ಮೇಲೆ ಹಳೆಯ ಮೂರು ಮರಗಳನ್ನು ಬಿಟ್ಟು ಬೇರೊಂದಿಲ್ಲ. ಪಟ್ಟಂದೂರು ಅಗ್ರಹಾರ ಕೆರೆಯನ್ನೂ ಮುನಿವೆಂಕಟಪ್ಪ ಎಂಬುವವರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಈ ಪ್ರಕರಣದ ಕುರಿತು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ’ ಎಂದು ಮಾಹಿತಿ ನೀಡಿದರು.
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಇದುವರೆಗೆ 16,000 ಎಕರೆ ಜಮೀನನ್ನು ಭೂಸ್ವಾಧೀನ ಮಾಡಿಕೊಂಡಿದೆ. ಅದರಲ್ಲಿ ಶೇ 25ರಷ್ಟು ಜಾಗವನ್ನು (4,000 ಎಕರೆ) ಸಾರ್ವಜನಿಕ ಉಪಯೋಗಕ್ಕೆ (ಸಿ.ಎ) ಮೀಸಲಿಡಬೇಕಿತ್ತು. ಆದರೆ, ಸಾವಿರ ಎಕರೆ ಸಹ ಬಿಡಿಎ ಸ್ವಾಧೀನದಲ್ಲಿಲ್ಲ’ ಎಂದು ದೂರಿದರು.
‘ನಗರದಲ್ಲಿ 11 ಕೆರೆಗಳು ಒತ್ತುವರಿಯಾಗಿವೆ ಎಂದು ಸಣ್ಣ ನೀರಾವರಿ ಸಚಿವ ಶಿವರಾಜ ತಂಗಡಗಿ ಅವರೇ ಹೇಳಿಕೆ ನೀಡಿದ್ದಾರೆ. ಬೆಳ್ಳಂದೂರು ಕೆರೆ 16.29 ಎಕರೆ, ವರ್ತೂರು ಕೆರೆ 10.75 ಎಕರೆ, ಹೊರಮಾವು ಕೆರೆ 17 ಎಕರೆ, ರಾಚೇನಹಳ್ಳಿ ಕೆರೆ 11.10 ಎಕರೆ ಒತ್ತುವರಿಯಾಗಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದರು. ಆ ಒತ್ತುವರಿ ತೆರವುಗೊಳಿಸಲು ಏಕೆ ಕ್ರಮ ಕೈಗೊಂಡಿಲ್ಲ’ ಎಂದು ಕೇಳಿದರು.
‘ಕೆರೆಗಳ ಒತ್ತುವರಿ ತೀವ್ರ ಪ್ರಮಾಣದಲ್ಲಿ ನಡೆದಿದ್ದು, ಅಳಿದುಳಿದ ಕೆರೆಗಳು ಕೊಚ್ಚೆಗುಂಡಿಯಾಗಿವೆ. ಘನತ್ಯಾಜ್ಯವನ್ನೂ ತಂದು ಸುರಿಯಲಾಗುತ್ತಿದೆ. ನೀರಿನ ಮೂಲಗಳನ್ನೆಲ್ಲ ನಗರ ಕಳೆದುಕೊಳ್ಳುತ್ತಿದೆ. ಒಂದು ಅಂದಾಜಿನ ಪ್ರಕಾರ 1.50 ಲಕ್ಷ ಕೊಳವೆ ಬಾವಿಗಳನ್ನು ನಗರದಲ್ಲಿ ಕೊರೆಯಲಾಗಿದೆ. ಕಾವೇರಿಯಿಂದ 10 ಟಿಎಂಸಿ ಅಡಿ ಹೆಚ್ಚುವರಿ ನೀರನ್ನು ನಗರಕ್ಕೆ ಪೂರೈಸಲು ಸಚಿವ ಸಂಪುಟ ತೀರ್ಮಾನಿಸಿದೆ. ಇದರಿಂದ 1 ಲಕ್ಷ ಎಕರೆ ಕೃಷಿಭೂಮಿಗೆ ನೀರಿನ ಕೊರತೆಯಾಗಲಿದೆ’ ಎಂದು ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.
‘ಕೆರೆಗಳ ಅಭಿವೃದ್ಧಿ ಹೆಸರಿನಲ್ಲಿ ನೂರಾರು ಕೋಟಿ ವ್ಯಯಿಸಲಾಗಿದ್ದು, ಎಲ್ಲಿಯೂ ಅಭಿವೃದ್ಧಿ ಕೆಲಸ ನಡೆದಿಲ್ಲ. ಹೂಳು ಹಾಗೇ ಇದ್ದು, ಅಂತರ್ಜಲ ಮಟ್ಟ ಮತ್ತಷ್ಟು ಕುಸಿದಿದೆ. ಒತ್ತುವರಿಯನ್ನೂ ತೆರವುಗೊಳಿಸಿಲ್ಲ. ಇದು ಬಿಹಾರದ ಮೇವು ಹಗರಣಕ್ಕಿಂತ ದೊಡ್ಡ ಹಗರಣ, ಸಿಬಿಐ ತನಿಖೆ ನಡೆಸಲೇಬೇಕು’ ಎಂದು ಆಗ್ರಹಿಸಿದರು.
‘ಬೈರಸಂದ್ರ ಕೆರೆಯನ್ನೇ ಇಂಡಿಯನ್ ಓವರಸೀಸ್ ಬ್ಯಾಂಕ್ಗೆ ಒತ್ತೆಯಿಟ್ಟು ರಿಯಲ್ ಎಸ್ಟೇಟ್ ಉದ್ಯಮಿಗಳು ಸಾಲ ಪಡೆದಿದ್ದರು. ಸಾಲ ವಸೂಲಾತಿಗಾಗಿ ಬ್ಯಾಂಕ್ ಕೂಡ ಕೆರೆಯನ್ನೇ ಹರಾಜಿಗೆ ಹಾಕಿತ್ತು. ₨ 6.70 ಕೋಟಿಗೆ ಕೆರೆ ಹರಾಜು ಆಗಿತ್ತು. ಕೆರೆಯನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲು ಏರಬೇಕಾಯಿತು’.
- ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.