ADVERTISEMENT

ಪಿಎಸ್‌ಐ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 20:31 IST
Last Updated 16 ಜನವರಿ 2018, 20:31 IST

ಬೆಂಗಳೂರು: ನಡುರಸ್ತೆಯಲ್ಲಿ ನಿಂತು ಮದ್ಯ ಕುಡಿಯುತ್ತಿದುದ್ದನ್ನು ಪ್ರಶ್ನಿಸಿದ್ದಕ್ಕೆ ಮೂವರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಎಚ್‌ಎಎಲ್‌ ಠಾಣೆಯ ಪಿಎಸ್‌ಐ ನವೀನ್‌ ಹಾಗೂ ಕಾನ್‌ಸ್ಟೆಬಲ್‌ ಮೋಹನ್‌ ಮೇಲೆ ಹಲ್ಲೆ ಮಾಡಿದ್ದಾರೆ.

ಜ. 12ರ ಮಧ್ಯರಾತ್ರಿ ನಡೆದ ಘಟನೆ ಸಂಬಂಧ ಆರೋಪಿಗಳಾದ ಜಮ್ಮು ಕಾಶ್ಮೀರದ ಸಮೀರ್, ಆಂಧ್ರಪ್ರದೇಶದ ಚಂದ್ರಶೇಖರ್ ಮತ್ತು ದೆಹಲಿಯ ನವೀನ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

‘ಮುನೇನಕೊಳಲು ಬಳಿಯ ಪೇಯಿಂಗ್‌ ಗೆಸ್ಟ್‌ ಕಟ್ಟಡದಲ್ಲಿ ವಾಸವಿರುವ ಆರೋಪಿಗಳು, ಎಚ್‌ಎಎಲ್‌ ಗ್ರೂಪ್‌ ಫೀಲ್ಡ್‌ ಮಾಲ್‌ ಬಳಿ ರಸ್ತೆ ಮೇಲೆಯೇ ಪಾರ್ಟಿ ಮಾಡುತ್ತಿದ್ದರು. ಗಸ್ತಿನಲ್ಲಿದ್ದ ಪಿಎಸ್‌ಐ, ಸ್ಥಳಕ್ಕೆ ಹೋಗಿ ಬುದ್ಧಿವಾದ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಆರೋಪಿಗಳು, ಅವರೊಂದಿಗೆ ಜಗಳ ತೆಗೆದಿದ್ದರು’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಆರೋಪಿಗಳು ಕಂಠಪೂರ್ತಿ ಕುಡಿದಿದ್ದರು. ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಘಟನೆಯಲ್ಲಿ ಪಿಎಸ್‌ಐ ಹಾಗೂ ಕಾನ್‌ಸ್ಟೆಬಲ್‌ಗಳಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.