ADVERTISEMENT

ಸ್ಫೋಟ ಪ್ರಕರಣ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 19:30 IST
Last Updated 6 ಜುಲೈ 2018, 19:30 IST

ಬೆಂಗಳೂರು: ಎಚ್‌ಎಎಲ್‌ ಸಮೀಪದ ಲಾಲ್ ಬಹದ್ದೂರ್ ಶಾಸ್ತ್ರಿನಗರದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣ ಸಂಬಂಧ ನಗರದ ‘ಭೂಮಿಕಾ ಅರ್ಥ್ ಮೂವರ್ಸ್‌‘ ಕಂಪನಿಯ ಮಾಲೀಕ ವಸಂತ್ ಹಾಗೂ ವ್ಯವಸ್ಥಾಪಕಕಿರಣ್ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

8.5 ಎಕರೆ ವಿಸ್ತೀರ್ಣದ ಜಾಗದಲ್ಲಿ ವಸತಿ ಸಮುಚ್ಚಯ ನಿರ್ಮಿಸಲಾಗುತ್ತಿದೆ. ಅದರ ಅಡಿಪಾಯ ತೆಗೆಯುವಾಗ ಬಂಡೆಗಳನ್ನು ಒಡೆಯುವ ಕೆಲಸವನ್ನು ‘ಭೂಮಿಕಾ ಅರ್ಥ್ ಮೂವರ್ಸ್‌‘ ಕಂಪನಿಗೆ ಉಪಗುತ್ತಿಗೆ ನೀಡಲಾಗಿತ್ತು. ಕಂಪನಿಯ ಸಿಬ್ಬಂದಿ, ಪೊಲೀಸರ ಅನುಮತಿ ಪಡೆಯದೆ ಅಮೋನಿಯಂ ನೈಟ್ರೇಟ್ ರಾಸಾಯನಿಕ ಬಳಸಿ ಬಂಡೆಗಳನ್ನು ಒಡೆದಿದ್ದರು ಎಂದು ಹಿರಿಯ ಅಧಿಕಾರಿ ಹೇಳಿದರು.

‘ಬಂಡೆ ಒಡೆಯುವ ಕೆಲಸ ಮುಗಿದ ನಂತರ,ಅಮೋನಿಯಂ ನೈಟ್ರೇಟ್ ರಾಸಾಯನಿಕವನ್ನು ಮಣ್ಣಿನಡಿ ಹೊತ್ತಿಡಲಾಗಿತ್ತು. ಅದೇ ಸ್ಥಳದಲ್ಲೇ ಜುಲೈ 4ರಂದು ಸ್ಫೋಟ ಸಂಭವಿಸಿತ್ತು’ ಎಂದು ವಿವರಿಸಿದರು.

ADVERTISEMENT

‘ವಸತಿ ಸಮುಚ್ಚಯ ನಿರ್ಮಾಣದ ಕಾಮಗಾರಿಯನ್ನು ಕೇಂದ್ರ ಲೋಕೋಪಯೋಗಿ ಇಲಾಖೆಯು ಇ–ಟೆಂಡರ್ ಮೂಲಕ ಹೊಂಬಾಳೆ ಕನ್ಸ್‌ಟ್ರಕ್ಸನ್‌ ಕಂಪನಿಗೆ ನೀಡಿತ್ತು. ಆ ಕಂಪನಿಯು ‘ಭೂಮಿಕಾ ಅರ್ಥ್ ಮೂವರ್ಸ್‌‘ ಕಂಪನಿಗೆ ಉಪಗುತ್ತಿಗೆ ಕೊಟ್ಟಿದ್ದರಿಂದಲೇ ಈ ಅವಘಡ ಸಂಭವಿಸಿದೆ. ಕಾಮಗಾರಿ ಉಸ್ತುವಾರಿ ವಹಿಸಿಕೊಂಡಿದ್ದ ಎಚ್‍ಎಎಲ್ ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್‌ ನೀಡಿದ್ದೇವೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.