ADVERTISEMENT

ಅನುವಾದಗಳ ಮೂಲಕ ಕುವೆಂಪು ಹತ್ತಿರವಾದರು: ಎಸ್‌.ಜಿ.ಸಿದ್ಧರಾಮಯ್ಯ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2018, 18:59 IST
Last Updated 30 ಸೆಪ್ಟೆಂಬರ್ 2018, 18:59 IST
ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ (ಎಡತುದಿ) ಅವರು ಕೆ.ಸತ್ಯನಾರಾಯಣ, ಗೋವಿಂದಳ್ಳಿ ಕೃಷ್ಣೇಗೌಡ ಹಾಗೂ ರಾಘವೇಂದ್ರ ಪುರಾಣಿಕ್ ಅವರಿಗೆ ‘ವಿಶ್ವಚೇತನ’ ಪ್ರಶಸ್ತಿ ನೀಡಿ ಗೌರವಿಸಿದರು. ಚಿತ್ರದಲ್ಲಿ ಸಂಘಟಕ ಟಿ.ಸತೀಶ್ ಜವರೇಗೌಡ, ಸಂಸ್ಕೃತ ವಿ.ವಿ ಕುಲಪತಿ ಡಾ.ಪದ್ಮಾಶೇಖರ್, ವೇದಿಕೆ ಅಧ್ಯಕ್ಷ ಸುರೇಶ್ ಜೀವನ್ಮುಖಿ, ಚಿಂತಕ ಎಂ.ವಿ.ದೇವಶೆಟ್ಟಿಗೌಡ ಹಾಗೂ ರಘುನಂದನ್‌ ಇದ್ದಾರೆ –ಪ್ರಜಾವಾಣಿ ಚಿತ್ರ
ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ (ಎಡತುದಿ) ಅವರು ಕೆ.ಸತ್ಯನಾರಾಯಣ, ಗೋವಿಂದಳ್ಳಿ ಕೃಷ್ಣೇಗೌಡ ಹಾಗೂ ರಾಘವೇಂದ್ರ ಪುರಾಣಿಕ್ ಅವರಿಗೆ ‘ವಿಶ್ವಚೇತನ’ ಪ್ರಶಸ್ತಿ ನೀಡಿ ಗೌರವಿಸಿದರು. ಚಿತ್ರದಲ್ಲಿ ಸಂಘಟಕ ಟಿ.ಸತೀಶ್ ಜವರೇಗೌಡ, ಸಂಸ್ಕೃತ ವಿ.ವಿ ಕುಲಪತಿ ಡಾ.ಪದ್ಮಾಶೇಖರ್, ವೇದಿಕೆ ಅಧ್ಯಕ್ಷ ಸುರೇಶ್ ಜೀವನ್ಮುಖಿ, ಚಿಂತಕ ಎಂ.ವಿ.ದೇವಶೆಟ್ಟಿಗೌಡ ಹಾಗೂ ರಘುನಂದನ್‌ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಅನುವಾದಗಳ ಮೂಲಕ ರಾಷ್ಟ್ರಕವಿ ಕುವೆಂಪು ಅವರು ಜಗತ್ತಿಗೆ ಹತ್ತಿರವಾದರು. ಅವರ ಕೃತಿಗಳಲ್ಲಿರುವ ಬಹುತ್ವದ ಅಂಶವೇ ಅದಕ್ಕೆ ಕಾರಣ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ಧರಾಮಯ್ಯ ಹೇಳಿದರು.

ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ಡಾ.ದೇಜಗೌ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಇತರ ರಾಜ್ಯಗಳ ನಾಡಗೀತೆಗಳಲ್ಲಿ ಇಡೀ ರಾಷ್ಟ್ರವನ್ನು ಒಳಗೊಳ್ಳುವಂತಹ ಅಂಶಗಳು ಇಲ್ಲ. ಆದರೆ ಕುವೆಂಪು ಅವರು ಬರೆದ ಕವಿತೆ ನಮ್ಮ ರಾಜ್ಯದ ಆಚೆಗೂ ವಿಸ್ತರಿಸಿದೆ. ಅಖಂಡ ಭಾರತದ ಕಲ್ಪನೆ ಅದರಲ್ಲಿದೆ’ ಎಂದು ಹೇಳಿದರು.

ADVERTISEMENT

‘ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ಜಾನಪದ ಅಧ್ಯಯನ ಕಡಿಮೆಯಾಗಿದೆ. ಕನ್ನಡ ವಿಭಾಗಗಳು ಇನ್ನೂ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಬೇಕು’ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಪದ್ಮಾಶೇಖರ್‌, ‘ದೇಜಗೌ ಅವರನ್ನು ಸರ್ಕಾರ ಮರೆತಿದೆ. ಅವರ ಜನ್ಮಶತಮಾನೋತ್ಸವವನ್ನು ಸರ್ಕಾರವೇ ಮಾಡಬೇಕಿತ್ತು. ಈಗಲಾದರೂ ಎಚ್ಚೆತ್ತುಕೊಳ್ಳಬೇಕು’ ಎಂದು ಆಗ್ರಹಿಸಿದರು.

‘ಅವರನ್ನು ಕುರಿತಂತೆ 9 ಗ್ರಂಥಗಳು ಪ್ರಕಟಗೊಂಡಿವೆ. ಐದು ಪಿಎಚ್‌.ಡಿ ಪ್ರಬಂಧಗಳನ್ನು ರಚಿಸಲಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ಕೊಡಿಸುವುದಕ್ಕಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ’ ಎಂದು ತಮ್ಮ ಗುರುಗಳನ್ನು ನೆನೆದರು.

ಡಾ.ಕೆ. ಸತ್ಯನಾರಾಯಣ (ಕಥೆಗಾರ), ರಾಘವೇಂದ್ರ ಪುರಾಣಿಕ್‌ (ಲೆಕ್ಕ ಪರಿಶೋಧಕ), ಗೋವಿಂದಳ್ಳಿ ಕೃಷ್ಣೇಗೌಡ (ಸಮಾಜ ಸೇವಕ) ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.