ಬೆಂಗಳೂರು: ‘ನೋಟು ನಿಷೇಧ ಮತ್ತು ಜಿಎಸ್ಟಿ ಜಾರಿಯ ನಂತರ ಬದಲಾದ ರಿಸರ್ವ್ ಬ್ಯಾಂಕಿನ ನಿಯಮಾವಳಿಗಳಿಂದಾಗಿ ಸಹಕಾರಿ ಬ್ಯಾಂಕುಗಳು ಸಂಕಷ್ಟದಲ್ಲಿವೆ. ಹಲವು ಬ್ಯಾಂಕುಗಳು ಈಗಲೂ ನಷ್ಟದಲ್ಲಿವೆ. ಇಂಥ ಬ್ಯಾಂಕ್ಗಳಿಗೆ ಸರ್ಕಾರದ ನೆರವು ಬೇಕಿದೆ’ ಎಂದು ಶ್ರೀನಿಧಿ ಸೌಹಾರ್ದ ಸಹಕಾರ ಬ್ಯಾಂಕಿನ ಅಧ್ಯಕ್ಷ ಸದಾಶಿವರೆಡ್ಡಿ ಹೇಳಿದರು.
ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಶ್ರೀನಿಧಿ ಬ್ಯಾಂಕ್ ಪ್ರಸಕ್ತ ವರ್ಷದಲ್ಲಿ ಶೇ 17.93 ಲಾಭ ಗಳಿಸಿದ್ದು, ಗ್ರಾಹಕರು ₹ 20,541.67 ಲಕ್ಷ ಠೇವಣಿ ಇರಿಸಿದ್ದಾರೆ. ₹ 13,814.29 ಲಕ್ಷ ಸಾಲ ನೀಡಲಾಗಿದೆ. ಬ್ಯಾಂಕಿನ ಒಟ್ಟು ಶೇ 14 ಲಾಭಾಂಶದಲ್ಲಿ ಶೇ 2ರಷ್ಟನ್ನು ಬ್ಯಾಂಕಿನ ಭವಿಷ್ಯದ ದೃಷ್ಟಿಯಿಂದ ಮೀಸಲು ನಿಧಿಯಾಗಿರಿಸಲು ತೀರ್ಮಾನಿಸಲಾಗಿದೆ. ಉಳಿದ ಶೇ 12ರಷ್ಟು ಲಾಭವನ್ನು ಸದಸ್ಯರಿಗೆ ನೀಡಲು ತೀರ್ಮಾನಿಸಲಾಗಿದೆ’ ಎಂದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಸದಸ್ಯರಾದ ಆಕ್ಸ್ಫರ್ಡ್ ತಾಂತ್ರಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ನಾರಾಯಣರೆಡ್ಡಿ, ನಿವೃತ್ತ ಜಿಲ್ಲಾಧಿಕಾರಿ ಸೋಮಶೇಖರ್, ವಕೀಲರ ಸಂಘದ ಅಧ್ಯಕ್ಷ ರಂಗನಾಥ್, ವೇಮನ ತಾಂತ್ರಿಕ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚನ್ನಾರೆಡ್ಡಿ ಹಾಗೂ ಹಿರಿಯ ವಕೀಲ ಸಂಜಯ್ ಗೌಡ ಅವರನ್ನು ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.