ADVERTISEMENT

ಕೊರತೆ ನಡುವೆ ಗುಣಮಟ್ಟದ ಶಿಕ್ಷಣ

ಅರ್ಧ ಶತಮಾನ ಪೂರೈಸಿದ ಹಾರಕೂಡ ಪ್ರೌಢಶಾಲೆ, ಕ್ರೀಡೆಯಲ್ಲಿಯೂ ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 9:14 IST
Last Updated 22 ಮಾರ್ಚ್ 2017, 9:14 IST

ಬಸವಕಲ್ಯಾಣ: ತಾಲ್ಲೂಕಿನ ಹಾರಕೂಡ ಸರ್ಕಾರಿ ಪ್ರೌಢಶಾಲೆಯಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಇದ್ದರೂ ಶಾಲೆಯ ಮಕ್ಕಳು ಆಟ, ಪಾಠ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮುಂದಿ ದ್ದು, ಕಳೆದ ಕೆಲ ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ.

ಶಾಲೆ ಆರಂಭವಾಗಿ 50 ವರ್ಷಗ ಳಾಗಿವೆ. ಆದರೆ, ಸ್ಥಳದ ಅಭಾವ, ಕಟ್ಟಡದ ಕೊರತೆ ಇತ್ತು. ಪ್ರಾಥಮಿಕ ಶಾಲೆಯ ಕಟ್ಟಡದಲ್ಲಿಯೇ ತರಗತಿಗಳು ನಡೆಯುತ್ತಿದ್ದವು. ಗುಡ್ಡದ ಮೇಲೆ ನೂತನ ಕಟ್ಟಡ  ನಿರ್ಮಿಸಲಾಗಿದ್ದು, ಅಲ್ಲಿಗೆ ಹೋಗಲು ರಸ್ತೆ ಇರಲಿಲ್ಲ. ಹೀಗಾಗಿ ಅದು  ಆರಂಭವಾಗಿರಲಿಲ್ಲ. ಕಳೆದ ಎರಡು ವರ್ಷಗಳಿಂದ ಅಲ್ಲಿಯೇ ತರಗತಿಗಳನ್ನು ನಡೆಸಲಾಗುತ್ತಿದೆ.

ಕಲ್ಲುಬಂಡೆಗಳಿಂದ ಕೂಡಿದ್ದ ಶಾಲೆಯ ಆವರಣದ ಸ್ಥಳವನ್ನು ಸಮತಟ್ಟುಗೊಳಿಸಲಾಗಿದೆ. ಒಂದು ಭಾಗದಲ್ಲಿ ತಡೆಗೋಡೆ ನಿರ್ಮಿಸ ಲಾಗಿದೆ. ಅಲ್ಲದೆ ತರಕಾರಿ ಬೆಳೆದು ಕೈತೋಟ ನಿರ್ಮಿಸುವ ಪ್ರಯತ್ನ ನಡೆದಿದೆ.

ಎರಡು ವರ್ಷಗಳಿಂದ ಎಸ್ಸೆಸ್ಸೆಲ್ಸಿಯಲ್ಲಿ ಶೇ 98 ರಷ್ಟು ಫಲಿ ತಾಂಶ ಬರುತ್ತಿದೆ. ಫಲಿತಾಂಶ ಹೆಚ್ಚಳಕ್ಕೆ ಈ ವರ್ಷವೂ ವಿಶೇಷ ತರಗತಿಗಳು ನಡೆಸಲಾಗಿದೆ. ವೈಯಕ್ತಿಕ ಕಾಳಜಿ ತೆಗೆದುಕೊಂಡು ಬೋಧನೆ ಮಾಡಲಾಗಿದೆ ಮುಖ್ಯ ಶಿಕ್ಷಕ ಪ್ರಭಾಕರ ಕಳಮಾಸೆ ತಿಳಿಸಿದರು.

ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಯಲ್ಲಿಯೂ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ. ಕಳೆದ ವರ್ಷ ಶಾಲೆಯ ಕಬಡ್ಡಿ ತಂಡ ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ಪ್ರತಿಭಾ ಕಾರಂಜಿಯಲ್ಲಿ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಬಂದಿತ್ತು. 2015 ರಲ್ಲಿ ಕರಕುಶಲ ವಸ್ತು ಪ್ರದರ್ಶನದಲ್ಲಿ ಇಲ್ಲಿನ ಮಕ್ಕಳು ಜಿಲ್ಲಾಮಟ್ಟದಲ್ಲಿ ಬಹುಮಾನ ಪಡೆದಿದ್ದಾರೆ ಎಂದು ಹೇಳಿದರು.

ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ. ಆಟದ ಮೈದಾನ ಇಲ್ಲ. ಆದರೂ ಪಾಠದ ಜತೆಗೆ ಕ್ರೀಡೆಗೂ ಆದ್ಯತೆ ನೀಡಲಾಗುತ್ತಿದೆ. ಪ್ರತಿ ರಾಷ್ಟ್ರೀಯ ಹಬ್ಬದಂದು ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಮಕ್ಕಳು ಉತ್ತಮ ಪ್ರದರ್ಶನ ನೀಡುತ್ತಾರೆ. ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಶಿಕ್ಷಕ ಉಮಾಕಾಂತ ಭಂಗೆ ಹೇಳಿದ್ದಾರೆ.

ಶಾಲೆಯಲ್ಲಿ ಕೆಲ ತಿಂಗಳುಗಳಿಂದ ವಿಜ್ಞಾನ, ಗಣಿತ  ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಗ್ರಂಥಾಲಯ, ಪ್ರಯೋಗಾಲಯ ಮತ್ತು ಕಂಪ್ಯೂಟರ್ ಕೋಣೆಯ ಕೊರತೆ ಇದೆ. ಈ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಬೇಕು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷ ಧೂಳಪ್ಪ ಭೂರಾಂಡೆ ಒತ್ತಾಯಿಸಿದ್ದಾರೆ.

ಶಾಲೆಯ ಇನ್ನುಳಿದ ಮೂರು ಭಾಗದಲ್ಲಿ ತಡೆಗೋಡೆ ನಿರ್ಮಿಸಬೇಕು. ಗುಡ್ಡದ ಮೇಲೆ ಹೋಗಲು ರಸ್ತೆ ನಿರ್ಮಿಸಬೇಕು ಎಂದು ಗ್ರಾಮದ ನಿವಾಸಿ ಮಹಾದೇವಪ್ಪ ಆಗ್ರಹಿಸಿದ್ದಾರೆ.
–ಮಾಣಿಕ ಆರ್.ಭುರೆ

*
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 98 ರಷ್ಟು ಫಲಿತಾಂಶ ಬಂಧಿತ್ತು. ಈ ಬಾರಿಯೂ ಉತ್ತಮ ಫಲಿತಾಂಶಕ್ಕಾಗಿ ಪ್ರಯತ್ನಿಸಲಾಗುತ್ತಿದೆ.
-ಪ್ರಭಾಕರ ಕಳಮಾಸೆ,
ಮುಖ್ಯಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT