ಬೀದರ್: ಭಾಲ್ಕಿ ತಾಲ್ಲೂಕಿನ ಸಾಯಗಾಂವ್ ತೊಗರಿ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ತೊಗರಿ ಹಣ ಪಾವತಿಗೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ತಡೆ ಒಡ್ಡಿದ್ದಾರೆ ಎಂದು ಆರೋಪಿಸಿ ರೈತರು ನಗರದ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಸಾಯಗಾಂವ್ ಖರೀದಿ ಕೇಂದ್ರದಲ್ಲಿ 190 ಜನ ರೈತರು ತೊಗರಿ ಮಾರಾಟ ಮಾಡಿದ್ದಾರೆ. ಈ ಪೈಕಿ ಈಗಾಗಲೇ 186 ರೈತರಿಗೆ ಹಣ ಪಾವತಿಸಲಾಗಿದೆ. ಆದರೆ, ಸಚಿವರು ಕೇವಲ ನಾಲ್ವರ ಹಣ ಸಂದಾಯಕ್ಕೆ ತಡೆ ಒಡ್ಡಿ ಕಿರುಕುಳ ಕೊಡು ತ್ತಿದ್ದಾರೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕಾಳಿದಾಸ ವಾಮನರಾವ್ ಜಾಧವ ಆರೋಪಿಸಿದರು.
ಸಚಿವರ ಸಹೋದರಿ ಆಶಾ ಹಣಮಶೆಟ್ಟಿ ಹಾಗೂ ಭಾವ ಹಣಮಶೆಟ್ಟಿ ಅವರ ಹೆಸರಿನ ಮೇಲೆ ನಿಯಮ ಬಾಹಿರವಾಗಿ ಸಾಯಗಾಂವ್ ಖರೀದಿ ಕೇಂದ್ರದಲ್ಲಿ 38 ಕ್ವಿಂಟಲ್ ತೊಗರಿ ಮಾರಾಟ ಮಾಡಿದ್ದರೂ ಅವರಿಗೆ ಹಣ ಪಾವತಿಸಲಾಗಿದೆ ಎಂದು ಆರೋಪ ಮಾಡಿದರು. ರೈತರಾದ ಅಭಂಗರಾವ್ ಕಾರಬಾರಿ, ಬಾಲಾಜಿ ಜಾಧವರಾವ್, ಉಮಾಕಾಂತ ಜಾಧವರಾವ್, ಸರಸ್ವತಿ ಮಾಣಿಕಪ್ಪ ಡೊಂಗರಗೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.