ADVERTISEMENT

ಸದಸ್ಯರ ಗೈರು: ತಾ.ಪಂ. ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 6:02 IST
Last Updated 5 ಮಾರ್ಚ್ 2015, 6:02 IST

ಔರಾದ್: ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರು ಸೇರಿದಂತೆ ಬಹುತೇಕ ಸದಸ್ಯರು ಬಾರದಿರುವುದರಿಂದ ಬುಧ­ವಾರ ಇಲ್ಲಿ ನಡೆಯಬೇಕಿದ್ದ ತಾಲ್ಲೂಕು ಪಂಚಾ­ಯಿತಿ ಸಾಮಾನ್ಯ ಸಭೆ ರದ್ದಾಗಿದೆ.

ತಾಲ್ಲೂಕಿನ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕೆಲ ಮಹತ್ವದ ವಿಷಯ ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಸದಸ್ಯರು ಗೈರು ಹಾಜರಾಗುವ ಮೂಲಕ ಅಧ್ಯಕ್ಷ ವಿನಾಯಕ ಜಗದಾಳೆ ವಿರುದ್ಧ ಪರೋಕ್ಷ ಸಮರ ಸಾರಿದ್ದಾರೆ. ಸಭೆ ಆರಂಭದ ವೇಳೆ ಕೆಲ ಸದಸ್ಯರು ಸಭಾಂಗಣದ ಪಕ್ಕದ ಕೊಠಡಿಯ­ಲ್ಲಿದ್ದರೆ ಮತ್ತೆ ಕೆಲವರು ಹೊರಗಡೆ ಇದ್ದರು.

ಸಭೆಯ ನಿಗದಿತ ಅವಧಿಗಿಂತ ಅರ್ಧ ಗಂಟೆ ಸಮಯ ಮೀರಿದರೂ ಯಾವೊಬ್ಬ ಸದಸ್ಯರು ಸಭಾಂಗಣಕ್ಕೆ ಬಾರದೆ ಇರುವುದರಿಂದ ಕಾರ್ಯ ನಿರ್ವಹಣಾಧಿಕಾರಿ ಜಗನ್ನಾಥರೆಡ್ಡಿ ಸಭೆ ಮುಂದೂಡಿದರು. ಎಲ್ಲ ಸದಸ್ಯರ ಗಮನಕ್ಕೆ ತಂದು ಸಭೆ ನಿಗದಿ ಮಾಡಲಾಗಿದೆ.

ಆದರೆ, ಅವರು ಯಾವ ಕಾರಣಕ್ಕಾಗಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂಬುದು ನನಗೂ ಗೊತ್ತಿಲ್ಲ. ನಾಳೆ ಹುಣ್ಣಿಮೆ ಇದ್ದ ಕಾರ­ಣಕ್ಕೆ ಬರಲಿಕ್ಕಿಲ್ಲ ಎಂದು ಅಧ್ಯಕ್ಷ ವಿನಾಯಕ ಜಗದಾಳೆ ಸಮಾಧಾನ ಮಾಡಿ­ಕೊಂಡರು.

ನಮಗೆ ಸಭೆಗೆ ಬರಲು ಸ್ವಲ್ಪ ವಿಳಂಬವಾ­ಗಿದೆ. ಆದರೆ, ಅಧ್ಯಕ್ಷರು ಸಮಯ ಕೇಳದೆ ಸಭೆ ಮುಂದೂಡಿ­ದ್ದಾರೆ. ಅದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಸದಸ್ಯ ಶ್ರೀರಂಗ ಪರಿಹಾರ ಹೇಳಿದರು. ಕಾರ್ಯ­ನಿರ್ವಾಹಣಾ­ಧಿಕಾರಿಗಳು ನಮಗೆ ಸಮಯ ಕೇಳಲು ಅವಕಾಶವೇ ನೀಡಿಲ್ಲ ಎಂದು ಅಧ್ಯಕ್ಷ ವಿನಾಯಕ ಜಗದಾಳೆ ಸಮರ್ಥಿಸಿ­ಕೊಂಡರು.

ಸಮಯ ಕೇಳುವ ಅಧಿಕಾರ ಅಧ್ಯಕ್ಷರಿಗಿದೆ. ಆದರೆ ನಿಗದಿತ ಸಮಯ­ಕ್ಕಿಂತ ಅರ್ಧಗಂಟೆ ಜಾಸ್ತಿಯಾದರೂ ಒಬ್ಬ ಸದಸ್ಯರೂ ಬಂದಿಲ್ಲ ಎಂದ ಮೇಲೆ ಸಭೆ ಹೇಗೆ ನಡೆಸಲು ಸಾಧ್ಯ ಎಂದು ಕಾರ್ಯನಿರ್ವಹಣಾಧಿಕಾರಿ  ಜಗನ್ನಾಥ­ರೆಡ್ಡಿ ಪ್ರಶ್ನಿಸಿದ್ದಾರೆ.

ಇಲ್ಲಿಯ ತಾಲ್ಲೂಕು ಪಂಚಾಯಿತಿ­ಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದ್ದರೂ ಅಧ್ಯಕ್ಷ ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದ ಕಾರಣ ಈ ಸಭೆ ರದ್ದಾಗಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT