ಯಳಂದೂರು: ಗುಂಬಳ್ಳಿ ಗ್ರಾಮ ಪಂಚಾಯಿತಿಗೆ ಗ್ರಾಮ ವಿಕಾಸ ಯೋಜನೆಯಡಿ ₹ 1 ಕೋಟಿ ಹಣ ಬಿಡುಗಡೆಯಾಗಿದ್ದು ಶೀಘ್ರವೇ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಶಾಸಕ ಎಸ್. ಜಯಣ್ಣ ತಿಳಿಸಿದರು.
ಅವರು ಈಚೆಗೆ ಗುಂಬಳ್ಳಿ ಗ್ರಾಮದಲ್ಲಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ದೊಡ್ಡ ಗ್ರಾಮ ಪಂಚಾಯಿತಿಗಳಲ್ಲಿ ಗುಂಬಳ್ಳಿಯೂ ಒಂದು. ಅನುದಾನಗಳ ಸಮರ್ಪಕ ಬಳಕೆ ಮೂಲಕ ರಸ್ತೆ, ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಗ್ರಾಮ ವಿಕಾಸ ಯೋಜನೆಗೆ ಪಂಚಾಯಿತಿ ಸೇರ್ಪಡೆಯಾಗಿದೆ. ಕುಡಿಯುವ ನೀರು, ರಸ್ತೆ, ಚರಂಡಿ ಸೇರಿದಂತೆ ಮೂಲ ಸಮಸ್ಯೆಗಳ ನಿವಾರಣೆಗೆ ಹೆಚ್ಚಿನ ಕ್ರಮ ವಹಿಸಲಾಗುವುದು. ಗ್ರಾಮಸ್ಥರ ಸಲಹೆಯಂತೆ ಅಗತ್ಯಕ್ಕೆ ತಕ್ಕಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ಸದಸ್ಯರಿಗೆ ಸೂಚನೆ ನೀಡಿದರು.
ಪ್ರೌಢಶಾಲೆಗೆ 2 ಕೊಠಡಿಗಳು ಮಾತ್ರ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ದೂರುಗಳು ಬಂದಿದ್ದು ಹೊಸದಾಗಿ ಕೊಠಡಿ ಹಾಗೂ ಸುತ್ತುಗೋಡೆ ನಿರ್ಮಿಸಲಾಗುವುದು ಎಂದರು ಭರವಸೆ ನೀಡಿದರು.
ಜಿ.ಪಂ ಅಧ್ಯಕ್ಷ ಜೆ. ಯೋಗೇಶ್, ತಾ.ಪಂ ಅಧ್ಯಕ್ಷ ನಂಜುಂಡಯ್ಯ, ಸದಸ್ಯೆ ಭಾಗ್ಯಾ ನಂಜಯ್ಯ ಗ್ರಾ.ಪಂ ಅಧ್ಯಕ್ಷೆ ಗೌರಮ್ಮ ರಾಜಣ್ಣ, ಉಪಾಧ್ಯಕ್ಷೆ ಸುಧಾ ಸದಾಶಿವಮೂರ್ತಿ, ಮಾದೇಶ್, ಗೋವಿಂದರಾಜು, ನಾಗರಾಜು, ಶಿವಕುಮಾರ್, ಕೃಷ್ಣಯ್ಯ, ನಾರಾಯಣಸ್ವಾಮಿ, ಶಿವಕುಮಾರ್, ವೆಂಕಟೇಶ್, ಪ್ರಕಾಶ್, ರಂಗರಾಮು, ದೇವರಾಜು, ಜೆಇ ಪ್ರಶಾಂತ್ಕುಮಾರ್್, ಮುಡಿಗುಂಡ ಶಾಂತರಾಜು, ಪ್ರಕಾಶ್, ಬಾಬು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.