ಹನೂರು: ಸಮೀಪದ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆಯ ನಂತರ ಬೆಳಿಗ್ಗೆ 10 ಗಂಟೆಗೆ ಸಾಲೂರು ಬೃಹನ್ಮಠದ ಇಮ್ಮಡಿ ಗುರುಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು. ಒಂದು ಗಂಟೆಗೂ ಹೆಚ್ಚು ಕಾಲ ದೇವಾಲಯದ ಸುತ್ತಲೂ ರಥೋತ್ಸವ ಪ್ರದಕ್ಷಿಣೆ ನಡೆಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಹಣ್ಣು ಜವನ, ತಾವು ಬೆಳೆದು ಮೀಸಲಿಟ್ಟಿದ್ದ ದವಸ– ಧಾನ್ಯ, ನಗನಾಣ್ಯಗಳನ್ನು ರಥಕ್ಕೆ ಎಸೆದು ತಮ್ಮ ಹರಕೆ, ಕಾಣಿಕೆ ಸಲ್ಲಿಸಿದರು.
ಮಹಾರಥೋತ್ಸವಕ್ಕೂ ಮುನ್ನ ಮಡಿಯುಟ್ಟ ಬೇಡಕಂಪಣ ಸಮು ದಾಯದ 101 ಹೆಣ್ಣು ಮಕ್ಕಳು ಕಳಸ ಹಿಡಿದು ಮಹಾರಥೋತ್ಸವಕ್ಕೆ ಆರತಿ ಬೆಳಗಿದರು. ಬಳಿಕ ಉತ್ಸವ ಮೂರ್ತಿ ಯನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಮಹಾ ರಥೋತ್ಸವವನ್ನು ಕಣ್ತುಂಬಿಕೊಂಡರು. ಇಮ್ಮಡಿ ಮಹದೇವಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಸಾವಿರಾರು ಭಕ್ತರು ತೇರನ್ನು ಎಳೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು.
5 ದಿನಗಳ ಕಾಲ ವಿಜೃಂಭಣೆಯಿಂದ ಜರುಗುವ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಸಮರ್ಪಕ ನೀರಿನ ವ್ಯವಸ್ಥೆಗಾಗಿ ಕಾವೇರಿ ನದಿಯಿಂದ ಶೇಖರಣೆ ಮಾಡಲಾಗಿದ್ದ 1.90 ಕೋಟಿ ಲೀಟರ್ ನೀರು ಬಳಕೆಯಾಗಿದೆ.
ದಾಖಲೆ ಲಾಡು ಮಾರಾಟ
ಹನೂರು: ಮಹದೇಶ್ವರ ಸ್ವಾಮಿಯ ಐದು ದಿನಗಳ ಜಾತ್ರೆಯಲ್ಲಿ ಇದುವರೆಗೂ 5 ಲಕ್ಷಕ್ಕೂ ಅಧಿಕ ದಾಖಲೆಯ ಲಾಡು ಮಾರಾಟವಾಗಿದೆ. ಇದುವರೆಗೂ ಜರುಗಿದ ಶಿವರಾತ್ರಿ ಜಾತ್ರೆಯಲ್ಲಿ 4 ಲಕ್ಷ ಲಾಡುಗಳು ಮಾರಾಟವಾಗಿದ್ದವು. ಆದರೆ ಈ ಬಾರಿ ಭಕ್ತರ ಸಂಖ್ಯೆ ದ್ವಿಗುಣ ಗೊಂಡ ಹಿನ್ನೆಲೆಯಲ್ಲಿ ಲಾಡು ದಾಖಲೆಯ ಮಾರಾಟವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.