ಮಲೆ ಮಹದೇಶ್ವರ ಬೆಟ್ಟ: ‘ಸಮೀಪದ ಕಾಡೊಲ ಗ್ರಾಮವು ಸಮಸ್ಯೆಗಳನ್ನೇ ಹಾಸಿಹೊದಿದ್ದು, ಅದನ್ನು ಬಗೆಹರಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗಿಲ್ಲ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 250ರಿಂದ 300 ಕುಟುಂಬಗಳಿದ್ದು, ಸಾಲೂರು ಮಠದಿಂದ ಅರ್ಧ ಕಿ.ಮೀ ದೂರದಲ್ಲಿದೆ. ಗ್ರಾಮದಿಂದ ಮಠಕ್ಕೆ ಹೋಗುವ ರಸ್ತೆಗೆ 200 ಮೀಟರ್ ಮಾತ್ರ ಕಾಂಕ್ರೀಟ್ ಹಾಕಲಾಗಿದ್ದು, ಉಳಿದ ರಸ್ತೆಯನ್ನು ಅಭಿವೃದ್ಧಿ ಪಡಿಸದೆ ಹಾಗೆಯೇ ಬಿಡಲಾಗಿದೆ. ರಸ್ತೆ ಸಂಪೂರ್ಣ ಕಲ್ಲು,ಮುಳ್ಳಿನಿಂದ ಕೂಡಿದೆ.
ಇದೇ ಮಾರ್ಗವಾಗಿ ಅಂಗನವಾಡಿಗೆ ಮಕ್ಕಳು, ವಿದ್ಯಾರ್ಥಿಗಳು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಇದೆ. ಮಕ್ಕಳು ಆಯತಪ್ಪಿ ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ. ಗ್ರಾಮದ ಸಮಸ್ಯೆ ಬಗ್ಗೆ ಪಿಡಿಒಗೆ ತಿಳಿಸಿದ್ದರೂ ಕ್ರಮವಹಿಸಿಲ್ಲ ಎಂದು ಗ್ರಾಮದ ಮಹದೇವಸ್ವಾಮಿ ಆರೋಪಿಸಿದ್ದಾರೆ.
‘ಈ ವಾರ್ಡ್ನಲ್ಲಿ ನಾಲ್ಕು ಸದಸ್ಯರಿದ್ದಾರೆ. ಅವರು ಚುನಾವಣೆಗೂ ಮಂಚೆ ಮತ ಕೇಳಲು ಬಂದಿದ್ದು ಬಿಟ್ಟರೆ, ಈವರೆಗೂ ಇಲ್ಲಿನ ಸಮಸ್ಯೆಗಳನ್ನು ಕೇಳಲು ಬಂದಿಲ್ಲ. ನಾವೇ ಖುದ್ದಾಗಿ ಮನವಿ ಸಲ್ಲಿಸಿದ್ದರೂ ಸ್ಪಂದಿಸಿಲ್ಲ’ ಎಂದು ಆರೋಪಿಸಿದ್ದಾರೆ.
ಗ್ರಾಮದ ಹಲವು ಕುಟುಂಬಗಳಿಗೆ ಪಡಿತರ ಚೀಟಿಯೇ ಇಲ್ಲ. ಅಲ್ಲದೇ, ಅರ್ಜಿ ಸಲ್ಲಿಸಿದ ಹಲವರಿಗೆ ಪಡಿತರ ಚೀಟಿ ಬಂದು ನಾಲ್ಕು ತಿಂಗಳು ಕಳೆದರೂ ಅವುಗಳನ್ನು ವಿತರಿಸದಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.