ಚಾಮರಾಜನಗರ: ನಾಗರ ಪಂಚಮಿ, ಷಷ್ಠಿ ದಿನದಂದು ಹುತ್ತಕ್ಕೆ ಹಾಲು, ತುಪ್ಪ ಎರೆದು ಪೂಜೆ ಸಲ್ಲಿಸುವುದು ವಾಡಿಕೆ. ಆದರೆ, ಜಿಲ್ಲೆಯಲ್ಲಿ ಹುತ್ತಕ್ಕೆ ನಾಟಿ ಕೋಳಿಯ ಬಿಸಿ ರಕ್ತದ ನೈವೇದ್ಯ ಅರ್ಪಿಸಿ ‘ತನಿ ಹಬ್ಬ’ ಆಚರಿಸಲಾಯಿತು.
ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ‘ತನಿ ಹಬ್ಬ’ದ ಸಡಗರ ಕಂಡುಬಂತು. ಹೊಸಬಟ್ಟೆ ಧರಿಸಿದ್ದ ಮಕ್ಕಳು, ಮಹಿಳೆ ಯರು ಬೆಳಿಗ್ಗೆಯೇ ಹೊಲಕ್ಕೆ ಪೂಜಾ ಸಾಮಾಗ್ರಿಗಳೊಂದಿಗೆ ನಾಟಿಕೋಳಿ ಹಾಗೂ ಮೊಟ್ಟೆ ಕೊಂಡೊಯ್ದು, ಹುತ್ತಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ನಮಸ್ಕರಿಸಿದರು. ಬಳಿಕ, ಕೋಳಿಯ ಕತ್ತು ಕೊಯ್ದು ರಕ್ತವನ್ನು ಹುತ್ತದ ಕೋವಿಗಳಿಗೆ ಬಿಟ್ಟರು. ನಂತರ ಮೊಟ್ಟೆ ಮತ್ತು ಬೆಳ್ಳಿ ಅಥವಾ ತಾಮ್ರದಿಂದ ಮಾಡಿದ ಪುಟ್ಟದಾದ ‘ನಾಗರಹೆಡೆ’ ಆಭರಣವನ್ನು ಕೋವಿನಲ್ಲಿ ಹಾಕಿದರು.
‘ಜಮೀನುಗಳಲ್ಲಿ ನಾಗರಹಾವು ಕಾಣಿಸಿಕೊಳ್ಳುವುದು ಸಾಮಾನ್ಯ. ಷಷ್ಠಿ ಯಂದು ಹುತ್ತಕ್ಕೆ ಕೋಳಿ ಬಲಿ ನೀಡಿದರೆ ನಾಗರಹಾವು ಕಾಣಿಸಿಕೊಳ್ಳುವುದಿಲ್ಲ. ಇಲ್ಲದಿದ್ದರೆ ಹಾವು ಕಾಣಿಸಿಕೊಂಡು ನಾಗದೋಷ ಕಾಡುತ್ತದೆ ಎಂಬ ನಂಬಿಕೆ ಇಲ್ಲಿನ ಗ್ರಾಮೀಣ ಭಾಗಗಳಲ್ಲಿದೆ’ ಎಂದು ಸ್ಥಳೀಯರು ತಿಳಿಸಿದರು. ಕೋಳಿ ಬಲಿ ನೀಡದ ಜನರು ಹುತ್ತಕ್ಕೆ ಬಾಳೆಹಣ್ಣು, ಹಾಲು- ಸಕ್ಕರೆಯ ನೈವೇದ್ಯ ಅರ್ಪಿಸುವ ಮೂಲಕ ತನಿ ಹಬ್ಬ ಆಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.