ಚಾಮರಾಜನಗರ: ‘ಕಾನೂನು ಅರಿವು ಪಡೆದುಕೊಂಡರೆ ಸಂಘರ್ಷ ರಹಿತ ಜೀವನ ನಡೆಸಲು ಸಾಧ್ಯ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜೆ. ವಿಶಾಲಾಕ್ಷಿ ಅವರು ಬುಧವಾರಸಲಹೆ ನೀಡಿದರು.
ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ‘ಮಹಿಳೆಯರಿಗೆ ಕಾನೂನು ಅರಿವು ನೆರವು‘ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನಲ್ಲಿ ಕಾನೂನು ಕುರಿತು ಅರಿವು ಪಡೆದುಕೊಳ್ಳಬೇಕು. ಹಾಗಿದ್ದಾಗ,ಯಾವುದೇ ಸಮಸ್ಯೆ ಎದುರಾದರೂ ಬಗೆಹರಿಸಿಕೊಳ್ಳಬಹುದು. ಇದರಿಂದ ಜೀವನ ಮಟ್ಟ ಸುಧಾರಿಸುತ್ತದೆ. ನಿತ್ಯ ಅಗತ್ಯಕ್ಕೆ ಇರುವಂತಹ ಕಾನೂನು ಅರಿವು ಪ್ರತಿಯೊಬ್ಬರಿಗೂ ಬೇಕು’ ಎಂದು ಹೇಳಿದರು.
ಮುಖ್ಯವಾಗಿ ಜನನ, ಮರಣ ಪ್ರಮಾಣಪತ್ರ, ಮಹಿಳೆಯರ ಹಕ್ಕು, ಗ್ರಾಹಕರ ಕಾಯ್ದೆಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು. ಈಗಮಹಿಳೆಯರು ಹಾಗೂ ಮಕ್ಕಳು ಕಾನೂನು ತಿಳಿದುಕೊಳ್ಳಬೇಕಾದ ಅಗತ್ಯ ಹೆಚ್ಚಿದೆ ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಮಾತನಾಡಿ, ‘ಮಹಿಳಾ ಹಕ್ಕುಗಳ ಬಗ್ಗೆ ಎಲ್ಲರಿಗೂ ತಿಳಿದಿರಬೇಕು. ಸಮಾಜದಲ್ಲಿಮಹಿಳೆಯರನ್ನು ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಆದ್ದರಿಂದ ಮಹಿಳೆಯರು ಮತ್ತು ಮಕ್ಕಳು ಶಿಕ್ಷಣಕ್ಕೆ ಒತ್ತು ನೀಡಬೇಕು‘ ಎಂದರು.
ಬಾಲ ನ್ಯಾಯಮಂಡಳಿ ಸದಸ್ಯ ಟಿ.ಜೆ. ಸುರೇಶ್ ಮಾತನಾಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹರದನಹಳ್ಳಿ ವಲಯದ ಮೇಲ್ವಿಚಾರಕ ವೀರೇಶ್, ಆಂತರಿಕ ಲೆಕ್ಕ ಪರಿಶೋಧಕಿ ವಿಶಾಲಾಕ್ಷಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.