ADVERTISEMENT

ಅಂಬುಲೆನ್ಸ್ ಚಾಲಕರ ಹಿಂದೇಟು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2017, 7:27 IST
Last Updated 15 ಮಾರ್ಚ್ 2017, 7:27 IST

ಬಾಗೇಪಲ್ಲಿ: ಆಳವಾದ ಗುಂಡಿಗಳು, ಮೇಲೆದ್ದ ಜಲ್ಲಿಕಲ್ಲು, ಹರಸಾಹಸದಲ್ಲಿ ಸಾಗುವ ವಾಹನಗಳು...ಈ ಚಿತ್ರಣ ತಾಲ್ಲೂಕಿನ ಮಾರಗಾನಕುಂಟೆಯಿಂದ ದೇವಿಕುಂಟೆಗೆ ಸಾಗುವ ರಸ್ತೆಯಲ್ಲಿ ಕಂಡು ಬರುತ್ತದೆ.

ಮಾರಗಾನಕುಂಟೆ ಮತ್ತು ದೇವಿಕುಂಟೆ ನಡುವಿನ 8 ಕಿ.ಮೀ. ರಸ್ತೆ ಡಾಂಬರು ಕಂಡು 20 ವರ್ಷ ಕಳೆದಿದೆ. ಈಗ ರಸ್ತೆ ಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದ್ದು ಸಂಚಾರಕ್ಕೆ ತೀವ್ರವಾದ ತೊಂದರೆಯಾಗಿದೆ. ಶಾಲಾ ಮಕ್ಕಳು, ಕೂಲಿ ಕಾರ್ಮಿಕರು, ನಾಗರಿಕರು ಗ್ರಾಮದಿಂದ ಪಟ್ಟಣಕ್ಕೆ ಬರಬೇಕಾದರೆ ಹರಸಾಹಸ ಪಡಬೇಕು.

ಡಾಂಬರು ಕಾಣದೆ ರಸ್ತೆ ಹಾಳಾಗಿದ್ದರೂ ಲೋಕೋಪಯೋಗಿ ಇಲಾಖೆ ಹಾಗೂ ಜನಪ್ರತಿನಿಧಿಗಳು ಗಮನಹರಿಸುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುವರು.

ADVERTISEMENT

ಈ ಮಾರ್ಗದಲ್ಲಿ ಅಂಬುಲೆನ್ಸ್ ಓಡಾಟಕ್ಕೂ ಚಾಲಕರು ಹಿಂದು ಮುಂದು ನೋಡುವರು. ಇದರಿಂದ ವೃದ್ಧರು, ಗರ್ಭಿಣಿಯರಿಗೆ ಸಮಸ್ಯೆಯಾಗಿದೆ. ಈ ಬಗ್ಗೆ ಅಂಬುಲೆನ್ಸ್‌ ಚಾಲಕರನ್ನು ಪ್ರಶ್ನಿಸಿದರೆ ‘ನಿಮ್ಮ ಊರಿನ ರಸ್ತೆ ಹದಗೆಟ್ಟಿದೆ. ಬರಲು ಸಾಧ್ಯವಿಲ್ಲ ಕಠಿಣವಾಗಿ ತಿಳಿಸುವರು’ ಎಂದು ಗ್ರಾಮದ ವಾಸಿ ಶಂಕರಪ್ಪ ಬೇಸರದಿಂದ ನುಡಿಯುವರು.

ರಸ್ತೆ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ರಸ್ತೆ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಧರಣಿ ನಡೆಸುತ್ತೇವೆ ಎಂದು ದೇವಿಕುಂಟೆ ಗ್ರಾಮಸ್ಥ ಶ್ರೀನಿವಾಸ್ ಪ್ರಜಾವಾಣಿಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.